ಬೆಂಗಳೂರು: ಮಂಗಳವಾರ ಇಡೀ ರಾತ್ರಿ ಸುರಿದ ಧಾರಾಕಾರ ಮಳೆಗೆ ಬೆಂಗಳೂರು ತತ್ತರಗೊಂಡಿದ್ದು, ಹಲವು ಬಡಾವಣೆಗಳು ಜಲಾವೃತಗೊಂಡು ನಿವಾಸಿಗಳು ಪರದಾಡಿದರು.
ಹೊರಮಾವು, ಯಲಹಂಕ, ವಿದ್ಯಾಪೀಠ, ನಾಗಪುರ, ಸಂಪಂಗಿರಾಮನಗರ, ದಾಸರಹಳ್ಳಿ, ವಿದ್ಯಾರಣ್ಯಪುರ, ದೊಡ್ಡನೆಕ್ಕಿಂದಿ, ಬಾಣಸವಾಡಿ, ಜಕ್ಕೂರು ಸುತ್ತಮುತ್ತ 100 ಮಿಲಿ ಮೀಟರ್ಗೂ ಹೆಚ್ಚಿನ ಪ್ರಮಾಣದಲ್ಲಿ ಮಳೆ ಬಿದ್ದಿರುವುದು ದಾಖಲಾಗಿದೆ.
ಕೋರಮಂಗಲ ಚಾಮರಾಜಪೇಟೆ, ದೊಮ್ಮಲೂರು, ಬಿಟಿಎಂ ಲೇಔಟ್, ಬೆಳ್ಳಂದೂರು, ಮಾರತಹಳ್ಳಿ, ಸಾರಕ್ಕಿ, ವರ್ತೂರು, ಕೋಣಕುಂಟೆ, ಕೆಂಗೇರಿ ಸುತ್ತಮುತ್ತ ಕೂಡ ಜೋರು ಮಳೆಯಾಗಿದೆ.
ಪ್ರಮೋದ್ ಲೇಔಟ್, ಹೆಣ್ಣೂರು ಬಂಡೆ ವಡ್ಡರಪಾಳ್ಯದಲ್ಲಿ ರಾಜಕಾಲುವೆ ನೀರು ಮನೆಗಳಿಗೆ ನುಗ್ಗಿದೆ. ನೀರು ಹೊರ ಹಾಕಲು ನಿವಾಸಿಗಳು ಇಡೀ ರಾತ್ರಿ ಪರದಾಡಿದರು. ಹೆಣ್ಣೂರು ಬಂಡೆ ಬಳಿ ಮುಖ್ಯ ರಸ್ತೆಯೂ ಜಲಾವೃತಗೊಂಡು ನೀರಿನಲ್ಲೇ ವಾಹನ ಚಾಲನೆ ಮಾಡಲು ಸವಾರರು ತಿಣುಕಾಡಿದರು. ವಿಮಾನ ನಿಲ್ದಾಣ ರಸ್ತೆಯಲ್ಲೂ ಸವಾರರು ಪರದಾಡಿದರು.
ಸಾವಿರ ಮನೆಗಳಿಗೆ ನುಗ್ಗಿದ ನೀರು: ಕಡಿಮೆ ಅವಧಿಯಲ್ಲಿ ಹೆಚ್ಚಿನ ಪ್ರಮಾಣ ಮಳೆ ಸುರಿದಿರುವುದರಿಂದ ಹಾನಿ ಹೆಚ್ಚಾಗಿದೆ. ಯಲಹಂಕ ವಲಯದಲ್ಲಿ ಅತೀ ಹೆಚ್ಚಿನ ಮಳೆಯಾಗಿದೆ ಎಂದು ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಹೇಳಿದರು.
ಸಾವಿರಕ್ಕೂ ಹೆಚ್ಚಿನ ಮನೆಗಳಿಗೆ ನೀರು ನುಗ್ಗಿರುವ ಅಂದಾಜಿದೆ. ರಾತ್ರಿಯೇ 230ಕ್ಕೂ ಹೆಚ್ಚು ದೂರುಗಳು ಬಂದಿದ್ದವು, ಬೆಳಿಗ್ಗೆ ವೇಳೆಗೆ 400ಕ್ಕೂ ಅಧಿಕ ದೂರುಗಳು ದಾಖಲಾಗಿವೆ. ಪರಿಹಾರ ಕಾರ್ಯವನ್ನು ಬಿಬಿಎಂಪಿ ಆರಂಭಿಸಿದೆ ಎಂದು ಹೇಳಿದರು.
ಇನ್ನೊಂದೆಡೆ ಮಹಾಲಕ್ಷ್ಮಿ ಲೇಔಟ್ ವಿಧಾನಸಭಾ ಕ್ಷೇತ್ರವೊಂದರಲ್ಲೇ 850ಕ್ಕೂ ಅಧಿಕ ಮನೆಗಳಿಗೆ ನೀರು ನುಗ್ಗಿದೆ ಎಂದು ಕ್ಷೇತ್ರದ ಶಾಸಕರೂ ಆಗಿರುವ ಅಬಕಾರಿ ಸಚಿವ ಕೆ.ಗೋಪಾಲಯ್ಯ ಹೇಳಿದರು. ಬುಧವಾರ ಬೆಳಿಗ್ಗೆಯೇ ಬಿಬಿಎಂಪಿ ಅಧಿಕಾರಿಗಳ ಜತೆ ಹಾನಿ ಪ್ರದೇಶಗಳಿಗೆ ಭೇಟಿ ನೀಡಿ ಪರಿಶೀಲಿಸಿದ ಅವರು, ‘ತೊಂದರೆಗೆ ಒಳಗಾದ ಕುಟುಂಬಳಿಗೆ ಪರಿಹಾರ ಕೊಡಿಸಲು ಮುಖ್ಯಮಂತ್ರಿ ಜತೆ ಮಾತನಾಡುವೆ’ ಎಂದು ತಿಳಿಸಿದರು.
ಎಲ್ಲೆಲ್ಲಿ ಎಷ್ಟು ಮಳೆ
ಪ್ರದೇಶ; ಮಿಲಿ ಮೀಟರ್
ಹೊರಮಾವು; 155
ಯಲಹಂಕ; 129
ವಿದ್ಯಾಪೀಠ; 127
ರಾಜ್ಮಹಲ್; 122
ನಾಗಪುರ; 120
ಸಂಪಂಗಿರಾಮನಗರ; 119
ದಾಸರಹಳ್ಳಿ; 110
ವಿದ್ಯಾಪೀಠ; 109
ದೊಡ್ಡನೆಕ್ಕುಂದಿ; 108
ಬಾಣಸವಾಡಿ; 106
ಜಕ್ಕೂರು; 102
ಸಿಂಗಸಂದ್ರ; 98
ವನ್ನಾರಪೇಟೆ; 85
ವಿ.ವಿ. ಪುರ; 82
ಕೋರಮಂಗಲ; 80
ಚಾಮರಾಜಪೇಟೆ; 79
ದೊಮ್ಮಲೂರು; 79
ಎಚ್ಎಎಲ್; 77
ಬಿಟಿಎಂ ಲೇಔಟ್; 77
ನಾಯಂಡಹಳ್ಳಿ; 73
ಬೆಳ್ಳಂದೂರು; 66
ಬಿಳೇಕಹಳ್ಳಿ; 65
ಮಾರತಹಳ್ಳಿ; 61
ಸಾರಕ್ಕಿ; 61
ವರ್ತೂರು; 59
ಜ್ಞಾನಭಾರತಿ; 53
ಕೋಣನಕುಂಟೆ; 44
ಕೆಂಗೇರಿ; 37
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.