ಬೆಂಗಳೂರು: ಅರೆ ಪ್ರಜ್ಞಾವಸ್ಥೆಯಲ್ಲಿ ಆತ್ಮಗಳ ಜೊತೆಯಲ್ಲಿ ಮಾತನಾಡುತ್ತೇವೆ ಎಂದು ಹೇಳಿಕೊಳ್ಳುವ ಪಂಥದೆಡೆ ಆಕರ್ಷಿತಳಾಗಿದ್ದಾಳೆ ಎನ್ನಲಾಗಿದ್ದ ಬಾಲಕಿಯೊಬ್ಬಳು ಮನೆಯಿಂದ ನಾಪತ್ತೆಯಾಗಿದ್ದು, ಆಕೆಯನ್ನು ಹುಡುಕಿಕೊಡುವಂತೆ ಪೋಷಕರು ಟ್ವಿಟರ್ ಮೂಲಕ ಮನವಿ ಮಾಡಿದ್ದಾರೆ.
ಸುಬ್ರಹ್ಮಣ್ಯನಗರದಲ್ಲಿ ಪೋಷಕರೊಂದಿಗೆ ವಾಸವಿದ್ದ 17 ವರ್ಷದ ಅನುಷ್ಕಾ, ಈ ವರ್ಷದ ಅಕ್ಟೋಬರ್ 31ರಂದು ಮನೆಯಿಂದ ಕಾಣೆಯಾಗಿದ್ದಳು. ಈ ಸಂಬಂಧ ಪೋಷಕರು ಪೊಲೀಸರಿಗೆ ದೂರು ನೀಡಿದ್ದರು. ಇದ್ದ ಒಬ್ಬಳೇ ಮಗಳು ಮನೆಬಿಟ್ಟು ಹೋಗಿ ಎರಡು ತಿಂಗಳಾದರೂ ಆಕೆಯ ಸುಳಿವು ಸಿಕ್ಕಿಲ್ಲ. ಇದರಿಂದ ಅಸಹಾಯಕರಾಗಿರುವ ಅವರು ಈಗ ಟ್ವಿಟರ್ ಮೂಲಕ ಮನವಿ ಮಾಡಿದ್ದಾರೆ.
‘ಎರಡು ಜೊತೆ ಬಟ್ಟೆ ಹಾಗೂ ₹2,500 ನಗದಿನೊಂದಿಗೆ ಮನೆಬಿಟ್ಟು ಹೋಗಿದ್ದ ಮಗಳು ಇನ್ನೂ ಪತ್ತೆಯಾಗಿಲ್ಲ. ಅವಳ ಕೊರಗಿನಲ್ಲೇ ದಿನದೂಡುತ್ತಿದ್ದೇವೆ. ಆಕೆ ನಮ್ಮನ್ನು ತುಂಬಾ ಪ್ರೀತಿಸುತ್ತಿದ್ದಳು. ಅವಳು ಎಲ್ಲೇ ಇದ್ದರೂ ಮನೆಗೆ ಮರಳುತ್ತಾಳೆ’ ಎಂದು ಅನುಷ್ಕಾ ತಾಯಿ ಹೇಳಿದ್ದಾರೆ.
‘ಆಕೆಯ ವರ್ತನೆಯಲ್ಲಿ ಬದಲಾವಣೆಯಾಗಿತ್ತು. ಮನೆಗೆ ಬಂದೊಡನೆಯೇ ಕೊಠಡಿಯೊಳಗೆ ಸೇರಿಕೊಳ್ಳುತ್ತಿದ್ದಳು. ಏಕಾಂತದಲ್ಲೇ ಇರಲು ಬಯಸುತ್ತಿದ್ದಳು. ಯಾವ ವಿಚಾರವನ್ನೂ ನಮ್ಮೊಂದಿಗೆ ಹಂಚಿಕೊಳ್ಳುತ್ತಿರಲಿಲ್ಲ. ಇದರಿಂದ ಗಾಬರಿಗೊಂಡು ಆಕೆಯನ್ನು ಈ ವರ್ಷದ ಸೆಪ್ಟೆಂಬರ್ನಲ್ಲಿ ಮನೋವೈದ್ಯರ ಬಳಿ ಕರೆದುಕೊಂಡು ಹೋಗಿದ್ದೆವು’ ಎಂದು ಅನುಷ್ಕಾ ತಂದೆ ಅಭಿಷೇಕ್ ತಿಳಿಸಿದ್ದಾರೆ.
‘ಆಕೆ ಯಾವಾಗಲೂ ಆನ್ಲೈನ್ನಲ್ಲಿ ಇರುತ್ತಿದ್ದಳು. ಅರೆ ಪ್ರಜ್ಞಾವಸ್ಥೆಯಲ್ಲಿ ಆತ್ಮಗಳ ಜೊತೆಯಲ್ಲಿ ಮಾತನಾಡುತ್ತೇವೆ ಎಂದು ಹೇಳಿಕೊಳ್ಳುವ ಪಂಥಕ್ಕೆ (ಶಾಮನಿಸಂ) ಸೇರಿಕೊಳ್ಳುತ್ತೇನೆ. ಅದನ್ನೇ ಅಭ್ಯಾಸ ಮಾಡುತ್ತೇನೆ ಎಂದು ಆಗಾಗ ಹೇಳುತ್ತಿದ್ದಳು. ಅವಳಿನ್ನೂ ಚಿಕ್ಕವಳು. ಸರಿಯಾದ ನಿರ್ಧಾರಗಳನ್ನೂ ಕೈಗೊಳ್ಳಲು ಆಗದ ವಯಸ್ಸಿನವಳು. ಈಗ ಎಲ್ಲಿದ್ದಾಳೊ, ಏನು ಮಾಡುತ್ತಿದ್ದಾಳೊ ಒಂದೂ ತಿಳಿಯುತ್ತಿಲ್ಲ’ ಎಂದು ಭಾವುಕರಾಗಿ ನುಡಿದಿದ್ದಾರೆ.
ದ್ವಿತೀಯ ಪಿಯುಸಿಯಲ್ಲಿ ಉತ್ತೀರ್ಣಳಾಗಿದ್ದ ಆಕೆ, ಆಧ್ಯಾತ್ಮದೆಡೆ ಆಕರ್ಷಿತಳಾಗಿದ್ದಳು. ಅದಕ್ಕೆ ಸಂಬಂಧಿಸಿದ ವಿಡಿಯೊಗಳನ್ನೇ ಹೆಚ್ಚಾಗಿ ವೀಕ್ಷಿಸುತ್ತಿದ್ದಳು ಎಂದು ಹೇಳಲಾಗಿದೆ.
‘ಬಾಲಕಿಯು ಸುಬ್ರಹ್ಮಣ್ಯನಗರದಿಂದ ಆಟೊ ಹಿಡಿದು ಹೊರಮಾವು ಬಳಿ ಹೋಗಿರುವುದು ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿರುವ ದೃಶ್ಯಗಳ ಪರಿಶೀಲನೆಯಿಂದ ಗೊತ್ತಾಗಿದೆ. ಅಲ್ಲಿಂದ ಆಕೆ ಎಲ್ಲಿ ಹೋಗಿದ್ದಾಳೆ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ. ಹೊರಮಾವು ಸುತ್ತಲಿನ ಪ್ರದೇಶದಲ್ಲಿನ ಸಿಸಿಟಿವಿ ಕ್ಯಾಮೆರಾಗಳಲ್ಲಿ ಸೆರೆಯಾಗಿರುವ ದೃಶ್ಯಗಳನ್ನೂ ಪರಿಶೀಲಿಸುತ್ತಿದ್ದೇವೆ’ ಎಂದು ಬೆಂಗಳೂರು ಉತ್ತರ ವಿಭಾಗದ ಡಿಸಿಪಿ ವಿನಾಯಕ ಪಾಟೀಲ ‘ಪ್ರಜಾವಾಣಿ’ಗೆ ತಿಳಿಸಿದರು.
‘ನವೆಂಬರ್ 1 ರಂದು ಪೋಷಕರು ಮಗಳು ಕಾಣೆಯಾಗಿರುವ ಕುರಿತು ದೂರು ನೀಡಿದ್ದರು. ದೂರು ದಾಖಲಾದ ದಿನದಿಂದಲೇ ತನಿಖೆ ನಡೆಸುತ್ತಿದ್ದೇವೆ. ಪೋಷಕರು ನಮ್ಮೊಂದಿಗೆ ನಿರಂತರ ಸಂಪರ್ಕದಲ್ಲಿದ್ದಾರೆ. ಅವರಿಂದಲೂ ಮಾಹಿತಿ ಪಡೆದುಕೊಳ್ಳಲಾಗುತ್ತಿದೆ’ ಎಂದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.