ಬೆಂಗಳೂರು: ಗಲಭೆ ವೇಳೆ ಬೆಂಕಿ ಹಚ್ಚಿ ತಮ್ಮ ಮನೆ ಸುಟ್ಟಿರುವವರ ವಿರುದ್ಧ ಕ್ರಮಕ್ಕೆ ಆಗ್ರಹಿಸಿ ಪುಲಿಕೇಶಿ ನಗರ ಕ್ಷೇತ್ರದ ಶಾಸಕ ಅಖಂಡ ಶ್ರೀನಿವಾಸಮೂರ್ತಿ ಅವರು ಡಿ.ಜೆ.ಹಳ್ಳಿ ಠಾಣೆಗೆ ಶುಕ್ರವಾರ ದೂರು ನೀಡಿದ್ದಾರೆ.
ಮಧ್ಯಾಹ್ನ ಠಾಣೆಗೆ ಬಂದಿದ್ದ ಅವರು, ಪೂರ್ವ ವಿಭಾಗದ ಡಿಸಿಪಿ ಶರಣಪ್ಪ ಅವರನ್ನು ಭೇಟಿಯಾಗಿ 25 ನಿಮಿಷ ಚರ್ಚೆ ನಡೆಸಿದರು. ಅಂದು ನಡೆದ ಘಟನೆ ಬಗ್ಗೆ ವಿವರಿಸಿ ಲಿಖಿತವಾಗಿ ದೂರು ನೀಡಿದರು.
ಡಿ.ಜೆ.ಹಳ್ಳಿ ಠಾಣೆಯ ವಾಹನಗಳು ಸುಟ್ಟ ಅವಶೇಷಗಳನ್ನು ನೋಡಿ ದಂಗಾದರು. ಮನೆಗಿಂತಲೂ ಠಾಣೆಯಲ್ಲೇ ಹೆಚ್ಚು ಹಾನಿಯಾಗಿದೆಯಲ್ಲ ಎಂದು ಬೆಂಬಲಿಗರ ಜೊತೆ ಮಾತನಾಡಿದರು.
ದೂರಿನ ಬಗ್ಗೆ ಪ್ರತಿಕ್ರಿಯಿಸಿದ ಶ್ರೀನಿವಾಸಮೂರ್ತಿ, ‘ನನ್ನ ತಂದೆ ಕಟ್ಟಿದ್ದ ಹಾಗೂ ನಾನು ಆಡಿ ಬೆಳೆದ ಮನೆ ಸುಟ್ಟು ಕರಕಲಾಗಿದೆ. ತಾಯಿ ನೆನಪಿಗೆ ಇದ್ದ ತಾಳಿಯೂ ಕಾಣಿಸುತ್ತಿಲ್ಲ’ ಎಂದು ಭಾವುಕರಾದರು.
‘ಅಂದಾಜು ₹ 3 ಕೋಟಿಯಷ್ಟು ಹಾನಿಯಾಗಿದೆ. ಇಡೀ ಮನೆಯನ್ನು ಕೆಡವಬೇಕು. ತಂದೆ-ತಾಯಿ ನಮ್ಮನ್ನು ಸಾಕಿದ ಮನೆಯನ್ನು ಈ ಸ್ಥಿತಿಯಲ್ಲಿ ನೋಡಿ ದುಃಖವಾಗುತ್ತಿದೆ. ಇಂಥ ಮನೆಯಲ್ಲಿ ನಾವು ಇನ್ನು ಮುಂದೆ ಹೇಗೆ ಇರಬೇಕು. ಸುಟ್ಟಿರುವ ಮನೆಯನ್ನು ಕಿಡಿಗೇಡಿಗಳು ವಾಪಸು ನೀಡುವರೇ’ ಎಂದು ಪ್ರಶ್ನಿಸಿದರು.
‘ನನಗೆ ಹಾಗೂ ನನ್ನ ಕುಟುಂಬಕ್ಕೆ ರಕ್ಷಣೆ ಬೇಕು ಹಾಗೂ ಗಲಭೆ ಸೃಷ್ಟಿಸಿರುವ ಆರೋಪಿಗಳ ವಿರುದ್ಧ ಕಠಿಣ ಕಾನೂನು ಕ್ರಮ ಜರುಗಿಸಬೇಕು ಎಂದು ಕೋರಿ ಪೊಲೀಸರಿಗೆ ದೂರು ನೀಡಿದ್ದೇನೆ’ ಎಂದೂ ಅವರು ಹೇಳಿದರು.