ಗುರುವಾರ, 9 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಭಗವದ್ಗೀತೆ ಚರ್ಚೆ: ಬಹುತ್ವ ಛಿದ್ರಗೊಳಿಸುವ ಪ್ರಯತ್ನವೇ?’

ಕೃತಿ ಬಿಡುಗಡೆ ಸಮಾರಂಭದಲ್ಲಿ ಕನ್ನಡ ಪ್ರಾಧ್ಯಾಪಕಿ ಡಾ.ವಿನಯಾ ಒಕ್ಕುಂದ ಪ್ರಶ್ನೆ
Last Updated 12 ಮಾರ್ಚ್ 2023, 23:47 IST
ಅಕ್ಷರ ಗಾತ್ರ

ಬೆಂಗಳೂರು: ‘ಭಗವದ್ಗೀತೆಯ ವಿಷಯವನ್ನು ಪದೇ ಪದೇ ಚರ್ಚೆಯ ಮುನ್ನೆಲೆಗೆ ತರುತ್ತಿರುವುದು ಸಮಾಜದ ಹಿತಾಸಕ್ತಿಗೋ ಅಥವಾ ಬಹುತ್ವದ ಛಿದ್ರ ಮಾಡುವ ಹುನ್ನಾರವೋ’ ಎಂದು ಕನ್ನಡ ಪ್ರಾಧ್ಯಾಪಕಿ ಡಾ.ವಿನಯಾ ಒಕ್ಕುಂದ ಪ್ರಶ್ನಿಸಿದರು.

ಡಾ.ಬಿ.ಆರ್‌.ಮಂಜುನಾಥ್‌ ಅವರು ಇಂಗ್ಲಿಷ್‌ಗೆ ಅನುವಾದಿಸಿದ ಡಾ.ಜಿ.ರಾಮಕೃಷ್ಣ ಅವರ ‘ಭಗವದ್ಗೀತೆ –ಒಂದು ಅವಲೋಕನ’ ಕೃತಿ ಬಿಡುಗಡೆ ಸಮಾರಂಭದಲ್ಲಿ ಅವರು ಮಾತನಾಡಿದರು.

‘ಭಗವದ್ಗೀತೆಯನ್ನು ಮಕ್ಕಳ ಪಠ್ಯದಲ್ಲಿ ಅಳವಡಿಸಬೇಕು ಎಂಬ ಚರ್ಚೆಗಳು ಕಳೆದ ಮಾರ್ಚ್‌ನಲ್ಲಿ ಆರಂಭವಾದವು. ವಿದ್ಯಾರ್ಥಿಗಳಲ್ಲಿ ಭಗವದ್ಗೀತೆಯ ಮೂಲಕ ನೈತಿಕ ಮೌಲ್ಯ ಕಲಿಸಬೇಕು ಎಂದು ಶಿಕ್ಷಣ ಸಚಿವರು ಸ್ಪಷ್ಟನೆ ನೀಡಿದ್ದರು. ಚರ್ಚೆ ಹಾಗೂ ವಿರೋಧದ ಬಳಿಕ ಅದು ಅಲ್ಲಿಯೇ ಸ್ಥಗಿತಗೊಂಡಿದೆ. ಮತ್ತೆ ಯಾವ ಸಂದರ್ಭದಲ್ಲಿ ಮುನ್ನೆಲೆಗೆ ಬರುವುದೋ ಗೊತ್ತಿಲ್ಲ’ ಎಂದರು.

‘ಗುಜರಾತಿನಲ್ಲಿ ಕೋಮುಗಲಭೆಯ ಬಳಿಕ ಹೆಣ್ಣು ಮಕ್ಕಳು ಖಿನ್ನತೆಗೆ ಒಳಗಾಗಿದ್ದರಂತೆ. ಅವರಿಗೆ ಭಗವದ್ಗೀತೆಯ ಪಠಣ ಮಾಡಿದ್ದರಿಂದ ಅವರೆಲ್ಲರೂ ಖಿನ್ನತೆಯಿಂದ ಆಚೆಗೆ ಬಂದಿದ್ದರಂತೆ. ಅದು ಹೇಗೆ ಸಾಧ್ಯವಾಯಿತು ಎಂಬುದೂ ತಿಳಿದಿಲ್ಲ’ ಎಂದು ಹೇಳಿದರು.

‘ಬಹುತ್ವವನ್ನು ಛಿದ್ರ ಮಾಡುವ ಕೆಲಸ ನಡೆಯುತ್ತಿರುವ ಹೊತ್ತಿನಲ್ಲಿ ಭಗವದ್ಗೀತೆಯಲ್ಲಿ ಏನಿದು ಎಂದು ಅರಿಯಲು ಈ ಕೃತಿ ನೆರವಾಗಲಿದೆ. ವಾಸ್ತವ ತೆರೆದಿಟ್ಟಿದೆ. ಸಂಶೋಧನೆ, ಪೂರಕ ಅಂಶ. ಆಧಾರ ಸಹಿತ ಜಿ.ರಾಮಕೃಷ್ಣ ಅವರು ಕೃತಿ ರಚಿಸಿದ್ದಾರೆ’ ಎಂದರು.

ಸಾಹಿತಿ ಡಾ.ಜಿ.ರಾಮಕೃಷ್ಣ, ಕಲಾವಿದ ಟಿ.ಎಂ.ಕೃಷ್ಣ, ಗುಂಟೂರು ನಾಗಾರ್ಜುನ ವಿಶ್ವವಿದ್ಯಾಲಯದ ನಿವೃತ್ತ ಪ್ರಾಧ್ಯಾಪಕ ಪ್ರೊ.ಅಂಜಯ್ಯ ನನ್ನಪನೇನಿ, ನವ ಕರ್ನಾಟಕ ಪ್ರಕಾಶನದ ಡಾ.ಸಿದ್ದನಗೌಡ ಪಾಟೀಲ ಇದ್ದರು. ನವಕರ್ನಾಟಕ ಪ್ರಕಾಶನ ಮತ್ತು ಸಮಕಾಲೀನ ಸಾಮಾಜಿಕ ಸಾಂಸ್ಕೃತಿಕ ವೇದಿಕೆ ನಗರದಲ್ಲಿ ಕಾರ್ಯಕ್ರಮ ಆಯೋಜಿಸಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT