ಪೀಣ್ಯದಾಸರಹಳ್ಳಿ: ‘ಸಾಹಿತ್ಯಕ್ಕೂ ಸಂಗೀತಕ್ಕೂ ಅವಿನಾಭಾವ ಸಂಬಂಧವಿದೆ. ಸಾಹಿತ್ಯ ಸಂಗೀತವಾದಾಗ ಜನಪ್ರಿಯತೆಯನ್ನು ಪಡೆಯುತ್ತದೆ. ಕವಿಯ ಭಾವಗಳು ಸ್ವರವಾದಾಗ ಜನ ಮಾನ್ಯತೆಯನ್ನು ಪಡೆಯುತ್ತವೆ’ ಎಂದು ಕಾದಂಬರಿಗಾರ್ತಿ ಮಮತಾ ವಾರನಹಳ್ಳಿ ಹೇಳಿದರು.
ದಾಸರಹಳ್ಳಿ ವಿಧಾನಸಭಾ ಕ್ಷೇತ್ರ ಕನ್ನಡ ಸಾಹಿತ್ಯ ಪರಿಷತ್ತು ಆಯೋಜಿಸಿದ್ದ ತಮ್ಮೇನಹಳ್ಳಿಯ ಶ್ರೀ ಕೃಷ್ಣ ಕಲಾಸಂಗಮದ 'ಭಾವ ಸ್ವರ' ಕನ್ನಡ ಗೀತಗಾಯನ ಕಾರ್ಯಕ್ರಮದಲ್ಲಿ ಮಾತನಾಡಿದರು.
ಕನ್ನಡಪರ ಚಿಂತಕ ಬಿ.ಎಲ್.ಎನ್ ಸಿಂಹ, ‘ಕವಿ ತನ್ನ ಕವಿತೆಗಳ ಮೂಲಕ ಪ್ರಸಿದ್ಧನಾಗಬೇಕಾದರೆ ಸಂಗೀತಗಾರ ಆ ಕವಿತೆಯನ್ನು ಹಾಡಿದಾಗ ಮಾತ್ರ ಅದಕ್ಕೊಂದು ಜನಮನ್ನಣೆ ಸಿಗುತ್ತದೆ’ ಎಂದರು.
ಕನ್ನಡ ಸಾಹಿತ್ಯ ಪರಿಷತ್ತಿನದಾಸರಹಳ್ಳಿ ವಿಧಾನಸಭಾ ಕ್ಷೇತ್ರದ ಅಧ್ಯಕ್ಷ ವೈ. ಬಿ.ಎಚ್. ಜಯದೇವ್, ‘ನಮ್ಮ ಕನ್ನಡ ಗಾಯಕರು ಅಸಂಖ್ಯಾತ ಸಂಖ್ಯೆಯಲ್ಲಿ ಎಲ್ಲೆಲ್ಲೋ ಇದ್ದಾರೆ. ಅವರನ್ನು ಹುಡುಕಿ ಬೆಳಕಿಗೆ ತರುವ ಕೆಲಸ ಆಗಬೇಕಾಗಿದೆ’ ಎಂದರು.
ಸಾಹಿತಿ ನಾಗರಾಜ್ ನಾಗಸಂದ್ರ, ನಿವೃತ್ತ ಅಧಿಕಾರಿ ಸಿದ್ದಪ್ಪ, ಶ್ರೀ ಕೃಷ್ಣ ಕಲಾಸಂಗಮದ ಅಧ್ಯಕ್ಷ ಎನ್. ಡಿ ಕೃಷ್ಣ ಮೂರ್ತಿ, ಕವಿ ಪ್ರಸನ್ನಕುಮಾರ್, ಸಂಘಟಕರಾದ ಪ್ರದೀಪ್, ಕವಿಯತ್ರಿ ಮಂಜು ಭಾಷಿಣಿ, ಭಾರತಿ ಕೋಕಿಲೆ, ಪುಷ್ಪಲತಾ, ರಶ್ಮಿ ಕಾಂಬೋಡಿಯಾ ಉಪಸ್ಥಿತರಿದ್ದರು.
ಪ್ರಸಿದ್ದ ಕವಿಗಳ ಭಾವಗೀತೆಗಳ 'ಭಾವಸ್ವರ’ ಕಾರ್ಯಕ್ರಮವು ಕೇಳುಗರ ಮನಸೂರೆಗೊಂಡಿತು.