ಬೆಂಗಳೂರು: ‘ಜಾಗತಿಕ ತಾಪಮಾನ ಏರಿಕೆಯಾಗುತ್ತಿರುವ ಕಾರಣ ಜೀವಸಂಕುಲವೇ ಅಪಾಯದಲ್ಲಿದೆ. ಜೀವ ವೈವಿಧ್ಯದ ಸಂರಕ್ಷಣೆ ನಮ್ಮೆಲ್ಲರ ಆದ್ಯ ಕರ್ತವ್ಯವಾಗಬೇಕು’ ಎಂದು ಹೆಚ್ಚುವರಿ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಅನಿತಾ ಅರೇಕಲ್ ಹೇಳಿದರು.
ಕರ್ನಾಟಕ ಜೀವ ವೈವಿಧ್ಯ ಮಂಡಳಿ, ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ ಹಾಗೂ ನಗರ ಸಾಮಾಜಿಕ ಅರಣ್ಯ ವಿಭಾಗದಿಂದನಗರದ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ಅಂತರರಾಷ್ಟ್ರೀಯ ಜೀವ ವೈವಿಧ್ಯ ದಿನಾಚರಣೆ ಉದ್ಘಾಟಿಸಿ ಅವರು ಮಾತನಾಡಿದರು.
‘ಜನರ ಆರೋಗ್ಯದ ಜತೆಗೆ ಜೀವ ವೈವಿಧ್ಯ ಕಾಪಾಡುವಂತಹ ಜೀವ ಸಂಕುಲವನ್ನು ರಕ್ಷಣೆ ಮಾಡಬೇಕು. ಸಾವಯವ ಪದ್ಧತಿಯ ಮೂಲಕ ಪಾರಂಪರಿಕ ಕೃಷಿಗೆ ಒತ್ತು ನೀಡಿದರೆ ಪೋಷಕಾಂಶದ ಜತೆಗೆ ಜೀವವೈವಿಧ್ಯದ ರಕ್ಷಣೆಯೂ ಸಾಧ್ಯ’ ಎಂದು ಪ್ರತಿಪಾದಿಸಿದರು.
‘ಇದಕ್ಕಾಗಿ ಗ್ರಾಮ ಮಟ್ಟದಲ್ಲಿ ಜೀವವೈವಿಧ್ಯ ನಿರ್ವಹಣಾ ಸಮಿತಿಗಳನ್ನು ರಚಿಸುವ ಮೂಲಕವೂ ಜಾಗೃತಿ ಮೂಡಿಸುವ ಕೆಲಸವಾಗಬೇಕು’ ಎಂದರು.