ಬೆಂಗಳೂರು: ಲಾಕ್ಡೌನ್ ನಡುವೆಯೂ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಿಂದ (ಕೆಐಎ) ಏಪ್ರಿಲ್ನಲ್ಲಿ ಒಟ್ಟು 1,425 ಟನ್ಗಳಷ್ಟು ಬೇಗನೆ ಹಾಳಾಗಬಲ್ಲ ತರಕಾರಿ, ಹಣ್ಣು ಹಾಗೂ ಇತರೆ ಉತ್ಪನ್ನಗಳು ವಿವಿಧ ಸ್ಥಳಗಳಿಗೆ ರಫ್ತಾಗಿವೆ.
ಕಳೆದ ವರ್ಷ ಇದೇ ತಿಂಗಳಲ್ಲಿ 2,770 ಟನ್ಗಳಷ್ಟು ಸರಕು ಪೂರೈಕೆಯಾಗಿತ್ತು. ಲಾಕ್ಡೌನ್ನಿಂದ ಸಾರಿಗೆ ಮೇಲಿನ ನಿರ್ಬಂಧ, ಕೃಷಿ ಕಾರ್ಮಿಕರ ಕೊರತೆ, ರೈತರು ಮತ್ತು ಸಾಗಣೆದಾರರ ಸಮಸ್ಯೆಗಳಿಂದ ಕಳೆದ ಬಾರಿಗಿಂತ ಶೇ 49ರಷ್ಟು ಕುಸಿತ ಕಂಡಿದೆ.
ದೋಹಾಗೆ 834 ಟನ್ ಅತಿ ಹೆಚ್ಚು ಸರಕು ಪೂರೈಕೆಯಾಗಿದ್ದು, ನಂತರದ ಸ್ಥಾನಗಳಲ್ಲಿ ದುಬೈ (146 ಟನ್) ಹಾಗೂ ಲಂಡನ್ (110 ಟನ್) ಇವೆ. ರಾಜ್ಯದ ವಿವಿಧ ಭಾಗಗಳಿಂದ ಹಣ್ಣು-ತರಕಾರಿಗಳನ್ನು 10 ವಿಮಾನಯಾನ ಸಂಸ್ಥೆಗಳ ಮೂಲಕ ಒಟ್ಟು 28 ಅಂತರರಾಷ್ಟ್ರೀಯ ಸ್ಥಳಗಳಿಗೆ ರಫ್ತು ಮಾಡಲಾಯಿತು.
ಹಸಿ ಮೆಣಸಿನಕಾಯಿ, ಬೆಂಡೆಕಾಯಿ, ಬದನೆ, ಈರುಳ್ಳಿ, ನುಗ್ಗೇಕಾಯಿ, ಹೂಕೋಸು, ಮಾವಿನ ಹಣ್ಣು, ಬಾಳೆಹಣ್ಣು, ಪಪ್ಪಾಯ, ದಾಳಿಂಬೆ, ಪೈನಾಪಲ್, ಹಲಸಿನ ಹಣ್ಣುಗಳು ಹೆಚ್ಚಿನ ಪ್ರಮಾಣದಲ್ಲಿ ರಫ್ತಾಗಿವೆ.