ಬೆಂಗಳೂರು: ನಗರದಲ್ಲಿ ಇತ್ತೀಚಿನ ದಿನಗಳಲ್ಲಿ ಬಿಎಂಟಿಸಿ ಬಸ್ಗಳಿಂದ ಅಪಘಾತಗಳು ಹೆಚ್ಚಾಗುತ್ತಿದ್ದು, ಇದಕ್ಕೆ ಕಡಿವಾಣ ಹಾಕಲು ಚಾಲಕರಿಗೆ ಸಂಚಾರ ಪೊಲೀಸರು ತರಬೇತಿ ನೀಡುತ್ತಿದ್ದಾರೆ.
‘ಸಂಚಾರ ನಿಯಮಗಳ ಬಗ್ಗೆ ತಿಳಿವಳಿಕೆ ಮೂಡಿಸಿ, ಅಪಘಾತಗಳಿಗೆ ಕಡಿವಾಣ ಹಾಕಲು ಚಾಲಕರಿಗೆ ತರಬೇತಿ ನೀಡಲಾಗುತ್ತಿದೆ. ಇದುವರೆಗೂ 3 ಸಾವಿರ ಚಾಲಕರು ತರಬೇತಿ ಪಡೆದಿದ್ದಾರೆ. 12 ಸಾವಿರ ಚಾಲಕರಿಗೆ ತರಬೇತಿ ನೀಡುವ ಗುರಿ ಇದೆ’ ಎಂದು ಸಂಚಾರ ವಿಭಾಗದ ಜಂಟಿ ಕಮಿಷನರ್ ಎಂ.ಎನ್. ಅನುಚೇತ್ ತಿಳಿಸಿದ್ದಾರೆ.
‘ಪ್ರತಿ ವರ್ಷವೂ ಬಿಎಂಟಿಸಿ ಬಸ್ಗಳಿಂದ 30ಕ್ಕೂ ಹೆಚ್ಚು ಅಪಘಾತಗಳು ಸಂಭವಿಸುತ್ತಿವೆ. ಸಂಚಾರ ನಿಯಮ ಉಲ್ಲಂಘನೆಯಿಂದ ಅಪಘಾತಗಳು ಸಂಭವಿಸುತ್ತಿರುವುದು ಗೊತ್ತಾಗಿದೆ. ಇದೇ ಕಾರಣಕ್ಕೆ ಚಾಲಕರಿಗೆ ತರಬೇತಿ ನೀಡಲಾಗುತ್ತಿದೆ. ತರಬೇತಿ ಪಡೆದ ಚಾಲಕರಿಂದ ಇದುವರೆಗೂ ಒಂದೂ ಅಪಘಾತ ಸಂಭವಿಸಿಲ್ಲ’ ಎಂದಿದ್ದಾರೆ.