ಬೆಂಗಳೂರು: ಶ್ರೀರಾಮಸೇವಾ ಮಂಡಳಿಯ ರಾಮನವಮಿ ಸೆಲಬ್ರೇಷನ್ಸ್ ಟ್ರಸ್ಟ್ 84ನೇ ‘ಶ್ರೀ ರಾಮನವಮಿ ಮತ್ತು ಅಂತರರಾಷ್ಟ್ರೀಯ ಸಂಗೀತೋತ್ಸವ’ದ ಅಂಗವಾಗಿ 75 ಸಂಗೀತಗಾರರಿಂದ ಭಾನುವಾರ ಸಂಜೆ 6.30ಕ್ಕೆ ವಿಶೇಷ ಕಾರ್ಯಕ್ರಮ ಹಮ್ಮಿಕೊಂಡಿದೆ.
ಚಾಮರಾಜಪೇಟೆಯ ಹಳೆಕೋಟೆ ಪ್ರೌಢಶಾಲೆ ಆವರಣದಲ್ಲಿ ಮೈಸೂರು ಮಂಜುನಾಥ್ ನೇತೃತ್ವದಲ್ಲಿ ಈ ಕಾರ್ಯಕ್ರಮ ನಡೆಯಲಿದೆ. ಭಾರತ ಸ್ವಾತಂತ್ರ್ಯ ಅಮೃತ ಮಹೋತ್ಸವದ ಅಂಗವಾಗಿ 75 ಕಲಾವಿದರು ಸಂಗೀತ ಕಛೇರಿ ನಡೆಸಿಕೊಡಲಿದ್ದಾರೆ.ಭೌತಿಕ ಹಾಗೂ ಆನ್ಲೈನ್ ಎರಡನ್ನು ಒಳಗೊಂಡ ಹೈಬ್ರಿಡ್ ಮಾದರಿಯಲ್ಲಿ ಕಾರ್ಯಕ್ರಮಗಳ ವೀಕ್ಷಣೆಗೆ ಅವಕಾಶ ಕಲ್ಪಿಸಲಾಗಿದೆ.
84ನೇ ‘ಶ್ರೀ ರಾಮನವಮಿ ಮತ್ತು ಅಂತರರಾಷ್ಟ್ರೀಯ ಸಂಗೀತೋತ್ಸವ’ಮೇ 2ರವರೆಗೆ ನಡೆಯಲಿದೆ.ಹಿಂದೂಸ್ತಾನಿ ಮತ್ತು ಕರ್ನಾಟಕ ಶಾಸ್ತ್ರೀಯ ಸಂಗೀತಗಾರರು, ವಿದ್ವಾಂಸರು, ವೀಣೆ, ಪಿಟೀಲು, ಕೊಳಲು ವಾದಕರು ಕಾರ್ಯಕ್ರಮ ನಡೆಸಿಕೊಡಲಿದ್ದಾರೆ.
www.ramanavamitickets.com ವೆಬ್ಸೈಟ್ ಮೂಲಕ ಟಿಕೆಟ್ಗಳನ್ನು ಕಾಯ್ದಿರಿಸಬಹುದು. ಮಾಹಿತಿಗೆ ಮಂಡಳಿಯ ಪ್ರಧಾನ ಕಾರ್ಯದರ್ಶಿ ಮತ್ತು ಮ್ಯಾನೇಜಿಂಗ್ ಟ್ರಸ್ಟಿ ಎಸ್.ಎನ್. ವರದರಾಜ್ (9448079079), ಕಾರ್ಯನಿರ್ವಾಹಕ ಅಧಿಕಾರಿ ಎಸ್ ಅಭಿಜಿತ್ ವರದರಾಜ್ (9483518012) ಅಥವಾ ಕಚೇರಿಯನ್ನು (080–26604031) ದೂರವಾಣಿ ಮೂಲಕ ಸಂಪರ್ಕಿಸಬಹುದು.
ಈ ಕಾರ್ಯಕ್ರಮಕ್ಕೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಇನ್ಫೊಸಿಸ್ ಫೌಂಡೇಷನ್ ಸೇರಿದಂತೆ ವಿವಿಧ ಸಂಸ್ಥೆಗಳ ಸಹಯೋಗವಿದೆ ಎಂದು ಮಂಡಳಿ ತಿಳಿಸಿದೆ.