ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಲಂಚ ಪ್ರಕರಣ: ಬಿಬಿಎಂಪಿ, ಬೆಸ್ಕಾಂನ ನೌಕರರು ಸೇರಿ ಆರು ಮಂದಿ ಬಂಧನ

Last Updated 22 ಫೆಬ್ರುವರಿ 2022, 20:12 IST
ಅಕ್ಷರ ಗಾತ್ರ

ಬೆಂಗಳೂರು: ಎರಡು ಪ್ರತ್ಯೇಕ ಲಂಚ ಪ್ರಕರಣಗಳಲ್ಲಿ ಬಿಬಿಎಂಪಿ ಮತ್ತು ಬೆಸ್ಕಾಂ ಅಧಿಕಾರಿಗಳು, ನೌಕರರು ಸೇರಿದಂತೆ ಆರು ಮಂದಿಯನ್ನು ಮಂಗಳವಾರ ಬಂಧಿಸಿರುವ ಭ್ರಷ್ಟಾಚಾರ ನಿಗ್ರಹ ದಳ (ಎಸಿಬಿ), ₹ 1.60 ಲಕ್ಷ ನಗದು ವಶಪಡಿಸಿಕೊಂಡಿದೆ.

ಮುರುಗೇಶ ಪಾಳ್ಯದಲ್ಲಿರುವ ನಿವೇಶನವೊಂದಕ್ಕೆ ‘ಎ’ ಖಾತಾ ನೀಡುವಂತೆ ಜೆ.ಪಿ. ನಗರದ ಸನ್‌ ಸಿಟಿ ನಿವಾಸಿಯೊಬ್ಬರು ಬಿಬಿಎಂಪಿಯ ಕೋನೇನ ಅಗ್ರಹಾರ ವಾರ್ಡ್‌ (ಸಂಖ್ಯೆ 113) ಕಚೇರಿಗೆ ಅರ್ಜಿ ಸಲ್ಲಿಸಿದ್ದರು. ₹ 30,000 ಶುಲ್ಕ ಮತ್ತು ₹ 1.10 ಲಕ್ಷ ಲಂಚ ನೀಡುವಂತೆ ಅಲ್ಲಿನ ಸಹಾಯಕ ಕಂದಾಯ ಅಧಿಕಾರಿ ಬೇಡಿಕೆ ಇಟ್ಟಿದ್ದರು. ಈ ಕುರಿತು ಅರ್ಜಿದಾರರು ಎಸಿಬಿ ಬೆಂಗಳೂರು ನಗರ ಘಟಕಕ್ಕೆ ದೂರು ನೀಡಿದ್ದರು.

ಬಿಬಿಎಂಪಿ ಅಧಿಕಾರಿಗಳ ಪರವಾಗಿ ಶ್ರೀನಿವಾಸ್‌ ಎಂಬ ಖಾಸಗಿ ವ್ಯಕ್ತಿ ಲಂಚದ ಹಣವನ್ನು ಪಡೆದುಕೊಂಡರು. ಅವರೊಂದಿಗೆ ಬಿಬಿಎಂಪಿ ಜೀವನಬಿಮಾ ನಗರದ ಉಪ ವಿಭಾಗದ ಸಹಾಯಕ ಕಂದಾಯ ಅಧಿಕಾರಿ ಮೂರ್ತಿ ಮತ್ತು ಕಂದಾಯ ನಿರೀಕ್ಷಕ ಮೊಹಮ್ಮದ್‌ ಇದ್ರೀಸ್‌ ಅವರನ್ನು ಬಂಧಿಸಲಾಗಿದೆ ಎಂದು ಎಸಿಬಿ ಮಾಹಿತಿ ನೀಡಿದೆ.

ವಿಚಕ್ಷಣಾ ಅಧಿಕಾರಿಗಳ ಬಂಧನ: ಅಮೃತಹಳ್ಳಿ ನಿವಾಸಿಯೊಬ್ಬರು ಹೈ ಟೆನ್ಷನ್‌ ವಿದ್ಯುತ್‌ ಮಾರ್ಗದ ಅಡಿಯಲ್ಲಿ ಮನೆ ನಿರ್ಮಿಸಿದ್ದರು. ಅವರು ತಾತ್ಕಾಲಿಕ ವಾಗಿ ಪಡೆದುಕೊಂಡಿದ್ದ ವಿದ್ಯುತ್‌ ಸಂಪರ್ಕದ ಅವಧಿ 2021ರ ಆಗಸ್ಟ್‌– ಸೆಪ್ಟೆಂಬರ್‌ನಲ್ಲಿ ಅಂತ್ಯಗೊಂಡಿತ್ತು. ಬೆಸ್ಕಾಂ ಅಧಿಕಾರಿಗಳು ವಿದ್ಯುತ್‌ ಸಂಪರ್ಕ ಕಡಿತಗೊಳಿಸಿದ್ದರು. ಬಳಿಕ ಆ ವ್ಯಕ್ತಿ ಅಕ್ರಮವಾಗಿ ವಿದ್ಯುತ್‌ ಸಂಪರ್ಕ ಪಡೆದುಕೊಂಡಿದ್ದರು.

ದೂರಿನ ಆಧಾರದಲ್ಲಿ ಸ್ಥಳ ಪರಿಶೀಲನೆ ನಡೆಸಿದ್ದ ಬೆಸ್ಕಾಂ ವಿಚಕ್ಷಣ ದಳದ ಅಧಿಕಾರಿಗಳು, ಮಹಜರು ನಡೆಸಿದ್ದರು. ₹ 1.10 ಲಕ್ಷ ಲಂಚಕ್ಕೆ ಬೇಡಿಕೆ ಇಟ್ಟಿದ್ದ ಅಧಿಕಾರಿಗಳು, ₹ 45,000 ಪಡೆದುಕೊಂಡಿದ್ದರು. ಉಳಿದ ಮೊತ್ತ ನೀಡುವಂತೆ ಪುನಃ ಬೇಡಿಕೆ ಇಟ್ಟಿದ್ದರು. ಕಟ್ಟಡದ ಮಾಲೀಕರಾಗಿರುವ ಮಹಿಳೆಯ ಸಹೋದರ ಎಸಿಬಿಗೆ ದೂರು ನೀಡಿದ್ದರು.

ಮಲ್ಲೇಶ್ವರದಲ್ಲಿರುವ ಬೆಸ್ಕಾಂ ವಿಚಕ್ಷಣಾ ದಳದ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್‌ ನಾಗೇಶ್‌ ಮತ್ತು ಹೆಡ್‌ ಕಾನ್‌ಸ್ಟೆಬಲ್‌ ರಾಜೇಶ್‌ ಪರವಾಗಿ ಮೊಹಿದ್ದೀನ್‌ ಆರೀಫ್‌ ಎಂಬ ಖಾಸಗಿ ವ್ಯಕ್ತಿ ₹ 50,000 ಲಂಚದ ಹಣ ಪಡೆದುಕೊಂಡರು. ಮೂವರನ್ನೂ ಬಂಧಿಸಲಾಯಿತು ಎಂದು ಎಸಿಬಿ ಅಧಿಕಾರಿಗಳು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT