ಬೆಂಗಳೂರು: ಬಡ ಮಹಿಳೆಯೊಬ್ಬರಿಗೆ ಸಿಸೇರಿಯನ್ ನಡೆಸಲು ಲಂಚ ಪಡೆದ ಆರೋಪದ ಮೇಲೆ ಯಲಹಂಕ ಸಾರ್ವಜನಿಕ ಆಸ್ಪತ್ರೆಯ ಪ್ರಸೂತಿ ತಜ್ಞ ಡಾ. ರಾಮಚಂದ್ರ ಮತ್ತು ವಾರ್ಡ್ ಬಾಯ್ (ಹೊರ ಗುತ್ತಿಗೆ ನೌಕರ) ವಾಹಿದ್ ವಿರುದ್ಧ ಲೋಕಾಯುಕ್ತ ಪೊಲೀಸರು ಎಫ್ಐಆರ್ ದಾಖಲಿಸಿದ್ದಾರೆ.
ಮಂಜುಳಾ ಅವರಿಗೆ ಸಿಸೇರಿಯನ್ ನಡೆಸಲು ರಾಮಚಂದ್ರ ₹15,000 ಲಂಚಕ್ಕೆ ಬೇಡಿಕೆ ಇಟ್ಟಿದ್ದರು. ಜುಲೈ 15ರಂದು ಮಹಿಳೆಯ ಪತಿ ಮತ್ತು ಸಂಬಂಧಿಕರಿಂದ ₹10,000ವನ್ನು ವಾಹಿದ್ ಮೂಲಕ ಪಡೆಯಲಾಗಿತ್ತು. ಬಳಿಕ ಸಿಸೇರಿಯನ್ ನಡೆಸಲಾಗಿತ್ತು.
ಲಂಚಕ್ಕೆ ಬೇಡಿಕೆ ಇಟ್ಟಿರುವ ಕುರಿತು ಮಹಿಳೆಯ ಪತಿ ಮತ್ತು ಸಂಬಂಧಿಕರು ಲೋಕಾಯುಕ್ತರ ಗಮನಕ್ಕೆ ತಂದಿದ್ದರು. ಲೋಕಾಯುಕ್ತದ ಬೆಂಗಳೂರು ನಗರ ಘಟಕದ ಡಿವೈಎಸ್ಪಿ ಎಂ. ಪ್ರದೀಪ್ ಕುಮಾರ್ ನೇತೃತ್ವದ ತಂಡ ಆಸ್ಪತ್ರೆಗೆ ತೆರಳುವಷ್ಟರಲ್ಲಿ ಲಂಚದ ಹಣ ಪಡೆದುಕೊಂಡು, ಸಿಸೇರಿಯನ್ ಪೂರ್ಣಗೊಳಿಸಲಾಗಿತ್ತು. ವಾಹಿದ್ ಬಳಿಯಿಂದ ಹಣ ವಾಪಸ್ ಕೊಡಿಸಿದ್ದ ತನಿಖಾ ತಂಡ, ಈ ಕುರಿತು ವಾರ್ಡ್ಬಾಯ್ ಮತ್ತು ರಾಮಚಂದ್ರ ಮಧ್ಯದ ದೂರವಾಣಿ ಸಂಭಾಷಣೆಯನ್ನು ವಿಡಿಯೊ ರೆಕಾರ್ಡಿಂಗ್ ಮಾಡಿಕೊಂಡಿತ್ತು.
ಲಂಚ ಪಡೆಯುವಾಗಲೇ ಬಂಧನ ಕಾರ್ಯಾಚರಣೆ ನಡೆಸಲು ಸಾಧ್ಯವಾಗದ ಕಾರಣದಿಂದ ಆರಂಭಿಕ ಹಂತದಲ್ಲಿ ಲೋಕಾಯುಕ್ತ ಕಾಯ್ದೆಯಡಿ ಸ್ವಯಂಪ್ರೇರಿತ ದೂರು ದಾಖಲಿಸಿ, ವಿಚಾರಣೆ ಆರಂಭಿಸಲಾಗಿತ್ತು. ಕಾನೂನು ತಜ್ಞರ ಅಭಿಪ್ರಾಯ ಪಡೆದ ಬಳಿಕ ಲೋಕಾಯುಕ್ತದ ಬೆಂಗಳೂರು ನಗರ ಘಟಕದ ಪೊಲೀಸರು, ಜುಲೈ 25ರಂದು ಎಫ್ಐಆರ್ ದಾಖಲಿಸಿ, ತನಿಖೆ ಆರಂಭಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.