ಬೆಂಗಳೂರು: ಬಹುಜನ ಸಮಾಜ ಪಾರ್ಟಿ(ಬಿಎಸ್ಪಿ) ರಾಜ್ಯ ಘಟಕದಿಂದ ರಾಜ್ಯದ ವಿವಿಧ ಭಾಗಗಳಲ್ಲಿ ವಿಭಾಗ ಮಟ್ಟದ ನಾಲ್ಕು ಸಮಾವೇಶಗಳನ್ನು ಆಯೋಜಿಸಲಾಗುತ್ತಿದೆ.
‘ಸಂವಿಧಾನ ಸಂರಕ್ಷಣೆ ಮತ್ತು ಸಂಪೂರ್ಣ ಜಾರಿಗಾಗಿ ಬಹುಜನರ ನಡಿಗೆ – ಪಾರ್ಲಿಮೆಂಟಿನ ಕಡೆಗೆ’ ಘೋಷಣೆಯೊಂದಿಗೆ ಈ ಸಮಾವೇಶಗಳು ನಡೆಯಲಿವೆ ಎಂದು ಪಕ್ಷದ ರಾಜ್ಯಾಧ್ಯಕ್ಷ ಮಾರಸಂದ್ರ ಮುನಿಯಪ್ಪ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಸಮಾವೇಶದ ಮೂಲಕ ಇಲ್ಲಿವರೆಗೂ ದೇಶವನ್ನಾಳಿದ ಕಾಂಗ್ರೆಸ್, ಬಿಜೆಪಿ ಸೇರಿದಂತೆ ಇತರೆ ಪಕ್ಷಗಳು ಸಂವಿಧಾನವನ್ನು ಹೇಗೆ ದುರ್ಬಲಗೊಳಿಸಿವೆ ಎಂಬುದನ್ನು ಸಾರ್ವಜನಿಕರಿಗೆ ಮನವರಿಕೆ ಮಾಡಿಕೊಡಲಾಗುವುದು ಎಂದು ಅವರು ತಿಳಿಸಿದ್ದಾರೆ.
ಸಮಾವೇಶಗಳ ವಿವರ: ಬೆಂಗಳೂರು ವಿಭಾಗದ ಸಮಾವೇಶ, ದೇವನಹಳ್ಳಿಯಲ್ಲಿ ಮಾ.9ರಂದು ನಡೆಯಲಿದೆ. ಮಾ.10ರಂದು ಮೈಸೂರು ವಿಭಾಗದ ಸಮಾವೇಶ, ಸಕಲೇಶಪುರದಲ್ಲಿ, ಬೆಳಗಾವಿ ವಿಭಾಗದ ಸಮಾವೇಶ ಮಾ.11ರಂದು ವಿಜಯಪುರ ನಗರದಲ್ಲಿ ನಡೆಯಲಿದೆ. ಕಲಬುರಗಿ ವಿಭಾಗದ ಸಮಾವೇಶ, ಮಾ.12ರಂದು ಕಲಬುರಗಿಯಲ್ಲಿ ನಡೆಯಲಿದೆ.
ಸಮಾವೇಶದಲ್ಲಿ ಮುಖ್ಯ ಅತಿಥಿಗಳಿಗಾಗಿ ರಾಜ್ಯಸಭಾ ಸದಸ್ಯ ರಾಮ್ಜಿ ಗೌತಮ್, ಪಕ್ಷದ ಮುಖಂಡರಾದ ನಿತಿನ್ ಸಿಂಗ್, ಎಂ.ಗೋಪಿನಾಥ್ ಮತ್ತು ಎಂ.ಕೃಷ್ಣಮೂರ್ತಿಯವರು ಭಾಗವಹಿಸಲಿದ್ದಾರೆ ಎಂದು ಪ್ರಕಟಣೆಯಲ್ಲಿ ತಿಳಿಸಿದೆ.