ಬೆಂಗಳೂರು: ‘ಈ ಹೊತ್ತಿಗೆ’ ಸಂಸ್ಥೆಯ ಹೊನಲು ಕಾರ್ಯಕ್ರಮದಲ್ಲಿ ಸದಾಶಿವ ಸೊರಟೂರ ಅವರ ‘ಧ್ಯಾನಕ್ಕೆ ಕೂತ ನದಿ’ ಕಥಾ ಸಂಕಲನಕ್ಕೆ ‘ಈ ಹೊತ್ತಿಗೆ ಕಥಾ ಪ್ರಶಸ್ತಿ’ ಮತ್ತು ನಿಝಾಮ್ ಗೋಳಿಪಡ್ಪು ಅವರ ‘ಅನಾಮಧೇಯ ಗೀರುಗಳು’ ಕವನ ಸಂಕಲನಕ್ಕೆ ‘ಈ ಹೊತ್ತಿಗೆ ಕಾವ್ಯ ಪ್ರಶಸ್ತಿ’ ನೀಡಿ ಗೌರವಿಸಲಾಯಿತು.
ಕಥೆಗಾರ ಸದಾಶಿವ ಸೊರಟೂರು ಮಾತನಾಡಿ, ‘ಕಥಾ ಮಾಧ್ಯಮದ ಮೂಲಕ ನನ್ನನ್ನು ನಾನು ಬಿಡುಗಡೆ ಮಾಡುವ ದಾರಿಯನ್ನು ಕಂಡುಕೊಳ್ಳುತ್ತಿದ್ದೇನೆ’ ಎಂದು ಅನುಭವ ಹಂಚಿಕೊಂಡರು.
ಕವಿ ನಿಝಾಮ್ ಗೋಳಿಪಡ್ಪು ಮಾತನಾಡಿ, ‘ಮನದ ಮಾತುಗಳನ್ನು ಸಾಹಿತ್ಯದ ಭಾಷೆಯಲ್ಲಿ ವಿವರಿಸುವುದು ಕಷ್ಟ. ನನ್ನೊಳಗಿನ ನೋವುಗಳು ಕವಿತೆಯಾಗಿ ಮೂಡಿದವು’ ಎಂದು ವಿವರಿಸಿದರು.
‘ಪ್ರಜಾವಾಣಿ’ ಮುಖ್ಯ ಉಪಸಂಪಾದಕಿ ರಶ್ಮಿ ಎಸ್. ಪ್ರಶಸ್ತಿ ಪ್ರದಾನ ಮಾಡಿದರು. ‘ಸಾಮಾಜಿಕ ತ್ವರಿತ ಪಲ್ಲಟಗಳು ಮತ್ತು ಕನ್ನಡ ಸಾಹಿತ್ಯ’ ಬಗ್ಗೆ ಪತ್ರಕರ್ತೆ ವಿದ್ಯಾರಶ್ಮಿ ಉಪನ್ಯಾಸ ನೀಡಿದರು. ‘ಧ್ಯಾನಕ್ಕೆ ಕೂತ ನದಿ’ ಕಥಾ ಸಂಕಲನದ ಶೀರ್ಷಿಕೆ ಕಥೆಯನ್ನು ಇಂದಿರಾ ಶರಣ್ ಮತ್ತು ಗೀತಾ ಕುಂದಾಪುರ ವಾಚಿಸಿದರು. ‘ಅನಾಮಧೇಯ ಗೀರುಗಳು’ ಕವನ ಸಂಕಲನದ ಆಯ್ದ ಕವಿತೆಗಳನ್ನು ಸಿಂಧು ರಾವ್ ಮತ್ತು ಶಂಕರ್ ಸಿಹಿಮೊಗ್ಗೆ ವಾಚಿಸಿದರು.
ಆನಂದ ಕುಂಚನೂರ, ಮಧು ವೈ ಎನ್., ದೇವು ಪತ್ತಾರ್, ಇಂದಿರಾ ಶರಣ್, ಸಿಂಧು ರಾವ್, ರೇಣುಕಾ ಕೋಡಗುಂಟಿ ಸಂವಾದ ನಡೆಸಿಕೊಟ್ಟರು. ಇದೇ ಸಂದರ್ಭದಲ್ಲಿ ವಿಮರ್ಶಕಿ ಎಂ. ಎಸ್. ಆಶಾದೇವಿ ಅವರನ್ನು ಕಥೆಗಾರ ದೇವು ಪತ್ತಾರ್ ಸನ್ಮಾನಿಸಿದರು.