ಬೆಂಗಳೂರು: ನಿರ್ಮಾಣವಾದ ಒಂದು ವರ್ಷದ ನಂತರ ಬೈಯಪ್ಪನಹಳ್ಳಿ ಸರ್.ಎಂ. ವಿಶ್ವೇಶ್ವರಯ್ಯ ಟರ್ಮಿನಲ್ ಸೋಮವಾರದಿಂದ ಕಾರ್ಯಾರಂಭ ಮಾಡಿದೆ. ಎರ್ನಾಕುಲಂ ಎಕ್ಸ್ಪ್ರೆಸ್ ಈ ನಿಲ್ದಾಣದಿಂದ ಸಂಜೆ ಸಂಚಾರ ಆರಂಭಿಸುವ ಮೂಲಕ ಕಾರ್ಯಾರಂಭಿಸಿತು. ಹೊಸದಾಗಿ ಆರಂಭಗೊಂಡ ನಿಲ್ದಾಣದಲ್ಲಿ ಪ್ರಯಾಣಿಕರಿಗಿಂತ ರೈಲ್ವೆ ಹೋರಾಟಗಾರರು ಮತ್ತು ಮಾಧ್ಯಮ ಪ್ರತಿನಿಧಿಗಳೇ ಹೆಚ್ಚಿನ ಸಂಖ್ಯೆಯಲ್ಲಿದ್ದರು.
‘ರೈಲು ನಿಲ್ದಾಣವೇ ವಿಮಾನ ನಿಲ್ದಾಣದಂತಿದೆ. ನಿಲ್ದಾಣದ ವಿನ್ಯಾಸ ಮತ್ತು ಸ್ವಚ್ಛತೆಗೆ ಕೈಗೊಂಡಿರುವ ಕ್ರಮಗಳು ಅಂತರರಾಷ್ಟ್ರೀಯ ಮಟ್ಟದಲ್ಲಿವೆ. ಈ ನಿಲ್ದಾಣ ನೋಡಿ ಸಂತಸವಾಯಿತು’ ಎಂದು ರಮೇಶ್ ಬಾಬು ಮತ್ತು ಕಾರ್ತಿಕಾ ರಮೇಶ್ ದಂಪತಿ ಹರ್ಷ ವ್ಯಕ್ತಪಡಿಸಿದರು.
‘ನಿಲ್ದಾಣ ಕಾರ್ಯಾರಂಭ ಆಗಿದ್ದ ರಿಂದ ಸದ್ಯಕ್ಕೆ ನಿರಾಳವಾಗಿದ್ದೇವೆ. ಗಣ್ಯ ರಿಗೆ ಕಾಯುವುದನ್ನು ರೈಲ್ವೆ ಇಲಾಖೆ ನಿಲ್ಲಿಸಬೇಕು. ಈ ಸಂದರ್ಭವನ್ನು ಬಳಸಿಕೊಂಡು ರೈಲುಗಳ ಕಾರ್ಯಾಚರಣೆಯನ್ನು ಹೆಚ್ಚಿಸಬೇಕು’ ಎಂದು ರೈಲ್ವೆ ಹೋರಾಟಗಾರ ಕೃಷ್ಣ ಪ್ರಸಾದ್ ಹೇಳಿದರು. ಈ ರೈಲು ನಿಲ್ದಾಣಕ್ಕೆ ಸಂಪರ್ಕ ರಸ್ತೆ ಇಲ್ಲದಿದ್ದರಿಂದ ಕಾರ್ಯಾ ರಂಭ ವಿಳಂಬವಾಯಿತೇ ಹೊರತು ಪ್ರಧಾನ ಮಂತ್ರಿ ಅವರಿಂದ ಉದ್ಘಾಟನೆ ಮಾಡಿಸಲು ಕಾದಿರಲಿಲ್ಲ ಎಂದು ರೈಲ್ವೆ ಅಧಿಕಾರಿಗಳು ಸ್ಪಷ್ಟಪಡಿಸಿದರು.
ರೈಲು ವಿಳಂಬ: ಮೊದಲ ರೈಲಿನ ಕಾರ್ಯಾಚರಣೆ ಗೊಂದಲಗಳಿಂದ ಎರ್ನಾಕುಲಂ ರೈಲು 50 ನಿಮಿಷ ತಡವಾಗಿ ಹೊರಟಿತು. ಈ ರೈಲು ಬಾಣಸವಾಡಿ ನಿಲ್ದಾಣದಿಂದ ಹೊರಡಬೇಕಿತ್ತು. ದಿಢೀರ್ ಬದ ಲಾವಣೆ ಬಗ್ಗೆ ಜೂನ್ 3ರಂದು ರೈಲ್ವೆ ಇಲಾಖೆ ಪ್ರಕಟಣೆ ಹೊರಡಿಸಿತ್ತು. ಆದರೂ, ಪ್ರಯಾಣಿಕರು ಗೊಂದಲಕ್ಕೆ ಒಳಗಾಗಿದ್ದರು. ಪ್ರಯಾಣಿಕರನ್ನು ಬಾಣಸವಾಡಿಯಿಂದ ಹೊಸ ನಿಲ್ದಾಣಕ್ಕೆ ಕರೆ ತರಲು ಮೆಮು ರೈಲು ಮತ್ತು ಆರು ಬಿಎಂಟಿಸಿ ಬಸ್ಗಳನ್ನು ಅಧಿಕಾರಿಗಳು ವ್ಯವಸ್ಥೆ ಮಾಡಿದ್ದರು.
ಇನ್ನೂ ಮೂರು ರೈಲು ಸಂಚಾರ
ಮುಂದಿನ ದಿನಗಳಲ್ಲಿ ಈ ನಿಲ್ದಾಣದಿಂದ ಇನ್ನೂ ಮೂರು ರೈಲುಗಳು ಸಂಚರಿಸಲಿವೆ. ಕೊಚುವೇಲಿ– ಹಮ್ಸಫರ್ ಎಕ್ಸ್ಪ್ರೆಸ್(16320) ಜೂನ್ 10ರಿಂದ ಕಾರ್ಯಾಚರಣೆ ಆರಂಭಿಸಲಿದೆ.ಜೂನ್ 12ರಿಂದ ಪಟ್ನಾ –ಹಮ್ಸಫರ್ ಎಕ್ಸ್ಪ್ರೆಸ್(22354) ರೈಲು, ಬಂಗಾರಪೇಟೆಗೆ ಮೆಮು ರೈಲು ಜೂನ್ 20ರಿಂದ ಕಾರ್ಯಾಚರಣೆ ಮಾಡಲಿದೆ ಎಂದು ರೈಲ್ವೆ ಅಧಿಕಾರಿಗಳು ವಿವರಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.