ಬೆಂಗಳೂರು: ಹಣ ದ್ವಿಗುಣಗೊಳಿಸುವ ಆಮಿಷವೊಡ್ಡಿ ಜನರನ್ನು ವಂಚಿಸುತ್ತಿದ್ದ ಆರೋಪದಡಿ ಕೆಮರೂನ್ ಪ್ರಜೆ ಜಾಕ್ವಾಸ್ ಡೇವ್ಲೂಯಿಸ್ ಕಿಟ್ (37) ಎಂಬಾತನನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.
‘ಹೆಣ್ಣೂರು ಬಳಿಯ ಶಕ್ತಿನಗರದಲ್ಲಿ ಆರೋಪಿ ವಾಸವಿದ್ದ. ಆತನ ಮನೆ ಮೇಲೆ ದಾಳಿ ಮಾಡಲಾಗಿದೆ. ₹2,000 ಮೌಲ್ಯದ 5 ನೋಟುಗಳು, ನೋಟಿನ ಅಳತೆಯ 300 ಖಾಲಿ ಹಾಳೆಗಳು ಹಾಗೂ ಮೊಬೈಲ್ ಜಪ್ತಿ ಮಾಡಲಾಗಿದೆ’ ಎಂದು ಸಿಸಿಬಿ ಮೂಲಗಳು ತಿಳಿಸಿವೆ.
‘ನಗರದ ನಿವಾಸಿಯೊಬ್ಬರಿಗೆ ಕರೆ ಮಾಡಿದ್ದ ಆರೋಪಿ, ₹ 1 ಲಕ್ಷಕ್ಕೆ ₹ 2 ಲಕ್ಷ ಹಾಗೂ ₹ 5 ಲಕ್ಷಕ್ಕೆ ₹ 10 ಲಕ್ಷ ನೀಡುವುದಾಗಿ ಹೇಳಿದ್ದ. ಆತನ ನಡೆ ಬಗ್ಗೆ ಅನುಮಾನಗೊಂಡಿದ್ದ ನಿವಾಸಿ ಸಿಸಿಬಿ ಕಚೇರಿಗೆ ಮಾಹಿತಿ ನೀಡಿದ್ದರು. ಅದನ್ನು ಆಧರಿಸಿಯೇ ಕಾರ್ಯಾಚರಣೆ ನಡೆಸಲಾಗಿತ್ತು’ ಎಂದು ಮೂಲಗಳು ಹೇಳಿವೆ.
‘ಆರೋಪಿಯ ಪಾಸ್ಪೋರ್ಟ್ ಸಹ ಕಳೆದು ಹೋಗಿದ್ದು, ಆತನ ವೀಸಾ ಅವಧಿಯೂ ಮುಗಿದಿದೆ. ತನ್ನ ಬಳಿ ಯಾವುದೇ ದಾಖಲೆ ಇಲ್ಲವೆಂದು ಆರೋಪಿ ಹೇಳುತ್ತಿದ್ದಾನೆ’ ಎಂದು ಮೂಲಗಳು ತಿಳಿಸಿವೆ.