ವೈಟ್ಫೀಲ್ಡ್: ಮಹದೇವಪುರ ಕ್ಷೇತ್ರದ ಹಾಡೋಸಿದ್ದಾಪುರದ ಬಳಿ ಕಾವೇರಿ ಐದನೇ ಹಂತದ ನೀರು ಸರಬರಾಜು ಯೋಜನೆಯಡಿ ಜಲಮಂಡಳಿಯು ನಿರ್ಮಿಸುತ್ತಿರುವ 4 ಕೋಟಿ ಲೀಟರ್ ನೀರು ಸಂಗ್ರಹ ಸಾಮರ್ಥ್ಯದ ನೆಲಮಟ್ಟದ ಜಲಸಂಗ್ರಹಾಗಾರ ನಿರ್ಮಾಣ ಕಾಮಗಾರಿಗೆ ಶಾಸಕ ಅರವಿಂದ ಲಿಂಬಾವಳಿ ಭೂಮಿಪೂಜೆ ನೆರವೇರಿಸಿದರು.
‘ನಗರದ ಹೊರವಲಯದಲ್ಲಿ ನೀರಿನ ಅಬಾವ ಹೆಚ್ಚಾಗಿರುವುದರಿಂದ ಈ ಘಟಕವು ಹೆಚ್ಚು ಪೂರಕವಾಗಲಿದೆ. ಅಲ್ಲದೆ ಸುತ್ತಮುತ್ತಲಿನ ಪ್ರದೇಶದ ನೀರಿನ ಬವಣೆಯೂ ನಿಗಲಿದೆ’ ಎಂದು ತಿಳಿಸಿದರು.
‘ಕುಡಿಯುವ ನೀರು ಹಾಗೂ ಒಳಚರಂಡಿ ವ್ಯವಸ್ಥೆ ಕಲ್ಪಿಸಲು ಈಗಾಗಲೇ ಯೋಜನೆಗಳನ್ನು ರೂಪಿಸಿದ್ದು, ಹಂತ ಹಂತವಾಗಿ ಅನುಷ್ಠಾನಗೊಳಿಸಲಾಗುವುದು’ ಎಂದು ತಿಳಿಸಿದರು.
‘ನಗರದ ಹೊರವಲಯದಲ್ಲಿ ಕುಡಿಯುವ ನೀರಿನ ಸಮಸ್ಯೆಯನ್ನು ಪರಿಹರಿಸಲು ಅಗತ್ಯ ಕ್ರಮಗಳನ್ನು ಕೈಗೊಳ್ಳಬೇಕು’ ಎಂದು ಅಧಿಕಾರಿಗಳಿಗೆ ಅವರು ಸೂಚಿಸಿದರು.
ಕ್ಷೇತ್ರದ ಬಿಜೆಪಿ ಅಧ್ಯಕ್ಷ ಮನೋಹರ ರೆಡ್ಡಿ, ಆಶಾ ಸುರೇಶ್, ಮುಖಂಡರಾದ ರಾಜರೆಡ್ಡಿ, ರಾಜೇಶ್ ಮತ್ತಿತರರು ಹಾಜರಿದ್ದರು.