ಬೆಂಗಳೂರು: ಗಲಭೆ ಸಂಚಿನಲ್ಲಿ ಭಾಗಿಯಾಗಿರುವ ಆರೋಪದಡಿ ಪಾಲಿಕೆ ಸದಸ್ಯ ಸಂಪತ್ ರಾಜ್ ಅವರ ಆಪ್ತ ಸಹಾಯಕ ಅರುಣ್ ಮನೋಹರ್ ರಾಜ್ ಅವರನ್ನು ಸಿಸಿಬಿ ಪೊಲೀಸರು ಬುಧವಾರ ಬಂಧಿಸಿದ್ದಾರೆ.
ಸಂಪತ್ ರಾಜ್ ಅವರೊಂದಿಗೆ ಮಂಗಳವಾರ ವಿಚಾರಣೆಗೆ ಬಂದಿದ್ದ ಅರುಣ್ನನ್ನು ಪೊಲೀಸರು ವಶಕ್ಕೆ ಪಡೆದಿದ್ದರು. ಪ್ರಕರಣ ಸಂಬಂಧ ರಾತ್ರಿವರೆಗೆ ವಿಚಾರಣೆ ನಡೆಸಿದ್ದರು. ವಿಚಾರಣೆ ವೇಳೆ ತಪ್ಪೊಪ್ಪಿಕೊಂಡಿರುವ ಅರುಣ್ನನ್ನು ಬಂಧಿಸಲಾಗಿದೆ ಎಂದು ಸಿಸಿಬಿ ಮೂಲಗಳು ತಿಳಿಸಿವೆ.
ತಮಿಳುನಾಡು ಮೂಲದ ಅರುಣ್, ಪ್ರಥಮದರ್ಜೆ ಗುತ್ತಿಗೆದಾರ. ಒಂಬತ್ತು ವರ್ಷದಿಂದ ಸಂಪತ್ ರಾಜ್ ಅವರ ಜೊತೆಯಲ್ಲಿ ಇದ್ದ. ಗಲಭೆ ದಿನ ಸ್ಥಳದಲ್ಲಿದ್ದು ಗಲಭೆಕೋರರ ಜತೆ ಮಾತನಾಡಿರುವುದಕ್ಕೆ ಕೆಲ ಪುರಾವೆಗಳು ಸಿಕ್ಕಿದ್ದವು. ಅದರ ಬಗ್ಗೆ ಮಾಹಿತಿ ಪಡೆಯಲು ಸಿಸಿಬಿ ಅಧಿಕಾರಿಗಳು ಅರುಣ್ನನ್ನು ವಶಕ್ಕೆ ಪಡೆದಿದ್ದರು.