ಬೆಂಗಳೂರು: ರೌಡಿಯೊಬ್ಬನಿಂದ ಹಣ ಪಡೆದಿದ್ದ ಆರೋಪದಡಿ ಸಿಸಿಬಿ ರೌಡಿ ನಿಗ್ರಹ ದಳದ ಇನ್ಸ್ಪೆಕ್ಟರ್ ಜ್ಯೋತಿರ್ಲಿಂಗ ಹೊನಕಟ್ಟಿ ಅವರನ್ನು ಸೇವೆಯಿಂದ ಅಮಾನತು ಮಾಡಿ ಕಮಿಷನರ್ ಬಿ.ದಯಾನಂದ್ ಅವರು ಆದೇಶ ಹೊರಡಿಸಿದ್ದಾರೆ.
‘ಮಾರತ್ತಹಳ್ಳಿ ಠಾಣೆ ರೌಡಿ ಪಟ್ಟಿಯಲ್ಲಿ ಹೆಸರಿರುವ ರೋಹಿತ್ ಎಂಬಾತನಿಂದ ಇನ್ಸ್ಪೆಕ್ಟರ್ ಹಣ ಪಡೆದಿದ್ದ ಬಗ್ಗೆ ವ್ಯಕ್ತಿಯೊಬ್ಬರು ಮಾಹಿತಿ ನೀಡಿದ್ದರು. ವಿಚಾರಣೆ ನಡೆಸಿದ್ದ ಹಿರಿಯ ಅಧಿಕಾರಿಗಳು ಕಮಿಷನರ್ ಅವರಿಗೆ ವರದಿ ನೀಡಿದ್ದರು' ಎಂದು ಪೊಲೀಸ್ ಮೂಲಗಳು ಹೇಳಿವೆ.
‘ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ರೌಡಿಗಳ ಮನೆಗಳ ಮೇಲೆ ಪೊಲೀಸರು ಇತ್ತೀಚೆಗೆ ದಾಳಿ ಮಾಡಿದ್ದರು. ಹಲವು ರೌಡಿಗಳ ಮೇಲೆ ನಿಗಾ ವಹಿಸಿದ್ದರು. ಜ್ಯೋತಿರ್ಲಿಂಗ ಅವರಿಗೂ ರೌಡಿಗಳ ಮೇಲೆ ನಿಗಾ ಇರಿಸಲು ಹಿರಿಯ ಅಧಿಕಾರಿಗಳು ಸೂಚನೆ ನೀಡಿದ್ದರು.’
‘ರೌಡಿ ರೋಹಿತ್ನ ವಿಚಾರಣೆ ನಡೆಸಿದ್ದ ಜ್ಯೋತಿರ್ಲಿಂಗ, ಯುಪಿಐ ಮೂಲಕ ಹಣ ಪಡೆದಿರುವ ಆರೋಪವಿತ್ತು. ಪರಿಶೀಲಿಸಿದಾಗ, ಪುರಾವೆಗಳು ಸಿಕ್ಕಿವೆ. ಹೀಗಾಗಿ, ಇನ್ಸ್ಪೆಕ್ಟರ್ರನ್ನು ಅಮಾನತುಮಾಡಿ, ಇಲಾಖೆ ವಿಚಾರಣೆಗೂ ಆದೇಶಿಸಲಾಗಿದೆ’ ಎಂದು ತಿಳಿಸಿವೆ.
‘ರೋಹಿತ್, ಕೊಲೆ ಪ್ರಕರಣದಲ್ಲಿ ಜೈಲು ಸೇರಿ ಜಾಮೀನು ಮೇಲೆ ಹೊರಬಂದಿದ್ದ. ಕಾಡುಬೀಸನಹಳ್ಳಿಯಲ್ಲಿ ನೆಲೆಸಿದ್ದ. ಕ್ಯಾಬ್ ಚಾಲಕನಾಗಿ ಕೆಲಸ ಮಾಡುತ್ತಿದ್ದ. ಇನ್ಸ್ಪೆಕ್ಟರ್ಗೆ ಹಣ ನೀಡಿರುವ ಬಗ್ಗೆ ಈತನಿಂದಲೂ ಹೇಳಿಕೆ ಪಡೆಯಬೇಕಿದೆ’ ಎಂದು ಹೇಳಿವೆ.