ಬೆಂಗಳೂರು: ಮನೆಯಲ್ಲಿ ಯಾರೂ ಇಲ್ಲದ ಹೊತ್ತಿನಲ್ಲಿ ಕತ್ತು ಹಿಸುಕಿವೃದ್ಧ ರೊಬ್ಬರನ್ನು ಕೊಲೆ ಮಾಡಿದ ಆರೋಪಿ, ಚಿನ್ನ ಹಾಗೂ ಬೆಳ್ಳಿಯ ಆಭರಣಗಳನ್ನು ದೋಚಿ ಪರಾರಿಯಾಗಿದ್ದಾನೆ.ಈ ಸಂಬಂಧ ಚಾಮರಾಜಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
‘ಚಿಕ್ಕಪೇಟೆಯ ಎಸ್.ವಿ.ಲೇನ್ನಲ್ಲಿರುವ ದೀಪಂ ಎಲೆಕ್ಟ್ರಿಕಲ್ಸ್ ಅಂಗಡಿ ಮಾಲೀಕ ಜುಗರಾಜ್ ಜೈನ್ (74) ಕೊಲೆಯಾದವರು. ಅವರ ಮನೆಯಲ್ಲಿ ಕೆಲಸಕ್ಕಿದ್ದ ಬಿಜರಾಮ್ ನಾಪತ್ತೆಯಾ ಗಿದ್ದು, ಆತನೇ ಕೊಲೆ ನಡೆಸಿರಬಹುದು ಎಂದು ಕುಟುಂಬಸ್ಥರು ಅನುಮಾನ ವ್ಯಕ್ತಪಡಿಸಿದ್ದಾರೆ. ಆತನ ಪತ್ತೆಗೆ ವಿಶೇಷ ತಂಡ ರಚಿಸಲಾಗಿದೆ’ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
‘ಆರೋಪಿಯು ರಾಜಸ್ಥಾನದವನು. ಈತನನ್ನು ಜುಗರಾಜ್ ಅವರ ಕಿರಿಯ ಮಗ ಆನಂದ್ಕುಮಾರ್ ಆರು ತಿಂಗಳ ಹಿಂದೆ ಕೆಲಸಕ್ಕೆ ನೇಮಿಸಿಕೊಂಡಿದ್ದರು. ಜುಗರಾಜ್ ಅವ ರನ್ನುಆರೋಪಿಯೇ ನಿತ್ಯವೂ ಮನೆ ಯಿಂದ ಕಚೇರಿಗೆ, ಕಚೇರಿಯಿಂದ ಮನೆಗೆ ಕರೆದುಕೊಂಡು ಬರುತ್ತಿದ್ದ. ತಾವು ವಾಸವಿದ್ದ ಚಾಮರಾಜಪೇಟೆಯ ವಸತಿ ಸಮುಚ್ಚಯದ ನೆಲಮಹ ಡಿಯಲ್ಲೇ ಆರೋಪಿಗೆ ತಂಗಲು ವ್ಯವಸ್ಥೆ ಮಾಡಲಾಗಿತ್ತು’ ಎಂದು ಹೇಳಿದ್ದಾರೆ.
‘ಆನಂದ್ ಕೆಲಸದ ನಿಮಿತ್ತ ಇದೇ 23 ರಂದು ಗೋವಾಗೆ ಹೋಗಿದ್ದರು. ಅವರ ಪತ್ನಿಯು ಮಕ್ಕಳೊಂದಿಗೆ ತವರೂರು ಶಿಕಾರಿಪುರಕ್ಕೆ ತೆರಳಿದ್ದರು. ಇದೇ 24ರಂದು ಜುಗರಾಜ್ ಅಂಗಡಿಯಿಂದ ರಾತ್ರಿ 9.30ರ ಸುಮಾರಿಗೆ ಆರೋಪಿ ಜೊತೆಗೆ ಮನೆಗೆ ಬಂದಿದ್ದರು. ಮೇ 24 ಬೆಳಿಗ್ಗೆ ಆನಂದ್ ಅವರು ತಂದೆಗೆ ಹಲವು ಬಾರಿ ದೂರವಾಣಿ ಕರೆ ಮಾಡಿದರೂ ಸ್ವೀಕರಿಸಿರಲಿಲ್ಲ. ಇದರಿಂದ ಗಾಬರಿಯಾಗಿದ್ದ ಅವರು ಅಕ್ಕನ ಮಗನಿಗೆ ಕರೆ ಮಾಡಿ ಮನೆಗೆ ಹೋಗಿ ನೋಡುವಂತೆ ಸೂಚಿಸಿದ್ದರು. ಬುಧವಾರ ಬೆಳಿಗ್ಗೆ (ಮೇ 25) 10.30ರ ಸುಮಾರಿಗೆ ಮನೆಗೆ ಬಂದಿದ್ದ ಆತ, ಬಾಗಿಲು ತೆರೆಯಲು ಪ್ರಯತ್ನಿಸಿದ್ದ. ಅದು ಸಾಧ್ಯವಾಗದಿ ದ್ದಾಗ ಕೀ ಮಾಡುವವರನ್ನು ಕರೆಸಿ ಬಾಗಿಲು ತೆರೆಸಿದ್ದರು’ ಎಂದು ಮಾಹಿತಿ ನೀಡಿದ್ದಾರೆ.
‘ಜುಗರಾಜ್ ಮಲಗುತ್ತಿದ್ದ ಕೋಣೆಯಲ್ಲಿ ಪರಿಶೀಲಿಸಿದಾಗ ಅವರು ಕಂಡಿರಲಿಲ್ಲ. ಸ್ನಾನದ ಕೋಣೆಯಲ್ಲಿ ಅವರ ಮೃತದೇಹ ಪತ್ತೆಯಾಗಿತ್ತು. ಅವರ ಕೈಗಳನ್ನು ಹಗ್ಗದಿಂದ ಬಿಗಿದು ಕಟ್ಟಲಾಗಿತ್ತು. ಬಾಯಿಗೆ ಬಟ್ಟೆ ತುರುಕಲಾಗಿತ್ತು. ಮಲಗುವ ಕೋಣೆಯ ಬೀರು ತೆರೆದು ನೋಡಿದಾಗ ಅದರಲ್ಲಿ ಇಟ್ಟಿದ್ದ ಚಿನ್ನಾಭರಣಗಳು ನಾಪತ್ತೆಯಾಗಿದ್ದವು.ಬಿಜರಾಮ್ಗೆ ಕರೆ ಮಾಡಿದಾಗ ಆತನ ಮೊಬೈಲ್ ಸ್ವಿಚ್ ಆಫ್ ಆಗಿತ್ತು. ಆತನೇ ಕೊಲೆ ಮಾಡಿರಬಹುದೆಂದು ಅನುಮಾನ ವ್ಯಕ್ತಪಡಿಸಿ ಜುಗರಾಜ್ ಕುಟುಂಬದವರು ಠಾಣೆಗೆ ದೂರು ನೀಡಿದ್ದಾರೆ’ ಎಂದು ವಿವರಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.