ಬೆಂಗಳೂರು: ಬಸವನಗುಡಿ ಇ.ಎ.ಟಿ ರಸ್ತೆಯಲ್ಲಿರುವ ‘ಮಂಜುನಾಥ್ ಡಿಟಿಪಿ’ ಕಂಪ್ಯೂಟರ್ ಮಳಿಗೆ ಮಾಲೀಕನಿಗೆ ಮಾರಕಾಸ್ತ್ರ ತೋರಿಸಿ ಸುಲಿಗೆ ಮಾಡಲಾಗಿದ್ದು, ಈ ಸಂಬಂಧ ಪ್ರಕರಣ ದಾಖಲಾಗಿದೆ.
‘ಮೇ 16ರಂದು ನಡೆದಿರುವ ಕೃತ್ಯ ಸಂಬಂಧ ಮಾಲೀಕ ಎಸ್. ಮೋಹನ್ (51) ಎಂಬುವರುದೂರು ನೀಡಿದ್ದಾರೆ. ಮೂವರು ಅಪರಿಚಿತರು ಕೃತ್ಯ ಎಸಗಿದ್ದು, ಅವರ ಪತ್ತೆಗಾಗಿ ತನಿಖೆ ಮುಂದುವರಿದಿದೆ’ ಎಂದು ಪೊಲೀಸರು ಹೇಳಿದರು.
‘ಲಾಕ್ಡೌನ್ ಸಡಿಲಿಕೆ ಮಾಡಿದ್ದರಿಂದ ಮೋಹನ್ ಮಳಿಗೆ ತೆರೆದಿದ್ದರು. ಸಂಜೆ 4ರ ಸುಮಾರಿಗೆ ಮಳಿಗೆಗೆ ನುಗ್ಗಿದ್ದ ಮೂವರು, ಮಾರಕಾಸ್ತ್ರಗಳನ್ನು ತೋರಿಸಿ ಕೊಲೆ ಮಾಡುವುದಾಗಿ ಬೆದರಿಸಿದ್ದರು. ನಂತರ, 30 ಗ್ರಾಂ ಚಿನ್ನಾಭರಣ ಹಾಗೂ ₹3000 ನಗದು ಕಿತ್ತುಕೊಂಡು ಪರಾರಿಯಾದರು’ ಎಂದು ತಿಳಿಸಿದರು.