ಬೆಂಗಳೂರು: ನಿರಂತರ ಮಳೆಯಿಂದ ಜಲಾವೃತವಾಗಿರುವ ಬೆಂಗಳೂರಿನ ವಿವಿಧ ಪ್ರದೇಶಗಳಿಗೆ ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರು ಗುರುವಾರ ಭೇಟಿ ಸ್ಥಳೀಯ ನಿವಾಸಿಗಳ ಅಹವಾಲು ಆಲಿಸಿದರು.
ಯಮಲೂರು ಇಪ್ಸಿಲಾನ್ ಬಡಾವಣೆ, ಬೆಳ್ಳಂದೂರು ರಿಂಗ್ ರಸ್ತೆ ಎಕೋ ಸ್ಪೇಸ್ ಬಡಾವಣೆ, ರೈನ್ ಬೋ ಬಡಾವಣೆ ಮುಂತಾದ ಸ್ಥಳಗಳಿಗೆ ಅವರು ಭೇಟಿ ನೀಡಿದರು. ಕೆಪಿಸಿಸಿ ಕಾರ್ಯಾಧ್ಯಕ್ಷ ರಾಮಲಿಂಗಾರೆಡ್ಡಿ, ಕಾಂಗ್ರೆಸ್ ಕಾರ್ಯಕರ್ತರು ಜೊತೆಗಿದ್ದರು.
ಜಲಾವೃತ್ತವಾಗಿರುವ ಇಪ್ಸಿಲಾನ್ ಬಡಾವಣೆಯಲ್ಲಿ ಟ್ಯೂಬ್ ಬೋಟ್ನಲ್ಲಿ ತೆರಳಿ ಸಿದ್ದರಾಮಯ್ಯ ಸುತ್ತಮುತ್ತಲಿನ ಪ್ರದೇಶಗಳನ್ನು ವೀಕ್ಷಿಸಿದರು. ಬಳಗೆರೆಯ ದಿಶಾ ಅಪಾರ್ಟ್ಮೆಂಟ್ನ ನಿವಾಸಿಗಳ ಸಮಸ್ಯೆ ಆಲಿಸಿದ ಅವರು, ಬಳಿಕ ಮುನ್ನೇಕೊಳಾಲ ಗ್ರಾಮಕ್ಕೆ ಭೇಟಿ ನೀಡಿದರು. ಅಲ್ಲಿನ ಕೊಳಗೇರಿ ನಿವಾಸಿಗಳ ಸಮಸ್ಯೆ ಆಲಿಸಿದ ಸಿದ್ದರಾಮಯ್ಯ, ಹೊದಿಕೆಗಳನ್ನು ವಿತರಿಸಿದರು.
ಕಾಂಗ್ರೆಸ್ ನಾಯಕರ ಸಭೆ:ಭಾರತ ಒಗ್ಗೂಡಿಸಿ ಯಾತ್ರೆ ಮತ್ತು ಬಿಬಿಎಂಪಿ ಚುನಾವಣೆ ಕುರಿತಂತೆ ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲಾ ನೇತೃತ್ವದಲ್ಲಿ ಕಾಂಗ್ರೆಸ್ ನಾಯಕರ ಸಭೆ ಸಂಜೆ ನಡೆಯಲಿದೆ.
ಬಿಬಿಎಂಪಿ ಚುನಾವಣಾ ತಯಾರಿ, ಹೆಚ್ಚು ಸ್ಥಾನಗಳ ಗೆಲುವಿಗೆ ಕಾರ್ಯತಂತ್ರ ಸೇರಿದಂತೆ ಹಲವು ವಿಚಾರಗಳ ಬಗ್ಗೆ ಸಭೆಯಲ್ಲಿ ಚರ್ಚೆ ನಡೆಯಲಿದೆ. ಇದೇ ತಿಂಗಳ 30ರಂದು ಭಾರತ್ ಜೋಡೊ ಯಾತ್ರೆ ರಾಜ್ಯ ಪ್ರವೇಶಿಸಲಿದೆ.
ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್, ವಿಧಾನಪರಿಷತ್ ವಿರೋಧ ಪಕ್ಷದ ನಾಯಕ ಬಿ.ಕೆ. ಹರಿಪ್ರಸಾದ್, ಕೆಪಿಸಿಸಿ ಕಾರ್ಯಾಧ್ಯಕ್ಷರು ಸಭೆಯಲ್ಲಿ ಭಾಗವಹಿಸಲಿದ್ದಾರೆ.
ಬೆಂಗಳೂರು ನಗರದ ಬೆಳ್ಳಂದೂರು ರಿಂಗ್ ರಸ್ತೆಯಲ್ಲಿ ಸಂಚರಿಸಿ, ಮಳೆಯಿಂದ ಆಗಿರುವ ಹಾನಿ ವೀಕ್ಷಿಸಿದೆ. pic.twitter.com/ucKebV2HR2