ಬೆಂಗಳೂರು: ನಗರದ 12 ರೈಲ್ವೆ ಪೊಲೀಸರಿಗೂ ಸೋಂಕು ತಗುಲಿರು ವುದು ಭಾನುವಾರ ದೃಢಪಟ್ಟಿದೆ.
ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ರೈಲು ನಿಲ್ದಾಣದಲ್ಲಿರುವ ಪೊಲೀಸ್ ಠಾಣೆಯ 7 ಸಿಬ್ಬಂದಿ ಹಾಗೂ ಬೈಯಪ್ಪನಹಳ್ಳಿ ರೈಲ್ವೆ ಪೊಲೀಸ್ ಠಾಣೆಯ 5 ಸಿಬ್ಬಂದಿಯಲ್ಲಿ ಸೋಂಕು ಕಾಣಿಸಿಕೊಂಡಿದೆ.
ರೈಲು ಮೂಲಕ ಹೊರರಾಜ್ಯದಿಂದ ಸಾವಿರಾರು ಮಂದಿ ನಗರಕ್ಕೆ ಬಂದಿದ್ದರು. ನಗರದಲ್ಲಿದ್ದ ವಲಸೆ ಕಾರ್ಮಿಕರು ಸಹ ರೈಲಿನಲ್ಲಿ ಹೊರರಾಜ್ಯಕ್ಕೆ ಹೋಗಿದ್ದಾರೆ. ಅವರೆಲ್ಲರ ಪ್ರಯಾಣದ ವೇಳೆ ರೈಲ್ವೆ ಪೊಲೀಸರು ಕರ್ತವ್ಯ ನಿರ್ವಹಿಸಿದ್ದರು.
ಕೆಲ ದಿನಗಳ ಹಿಂದಷ್ಟೇ ರೈಲ್ವೆ ಪೊಲೀಸ್ ಎಸ್ಪಿ ಕಚೇರಿಯ 7 ಸಿಬ್ಬಂದಿಗೆ ಕೊರೊನಾ ದೃಢಪಟ್ಟಿತ್ತು. ಠಾಣೆ ಸಿಬ್ಬಂದಿಯೊಬ್ಬರಲ್ಲೂ ಕೊರೊನಾ ಇತ್ತು. ಹೀಗಾಗಿ, ಎಸ್ಪಿ ಕಚೇರಿ ಹಾಗೂ ಠಾಣೆಯನ್ನೂ ಸೀಲ್ಡೌನ್ ಮಾಡಲಾಗಿತ್ತು. ಇತ್ತೀಚೆಗಷ್ಟೇ ಠಾಣೆಯನ್ನು ಪುನಃ ತೆರೆಯಲಾಗಿತ್ತು.
ಈಗ ಹೊಸದಾಗಿ ಠಾಣೆ ಸಿಬ್ಬಂದಿಯಲ್ಲಿ ಕೊರೊನಾ ಸೋಂಕು ಕಾಣಿಸಿದ್ದು, ಠಾಣೆಯನ್ನು ಸೀಲ್ಡೌನ್ ಮಾಡುವ ಸಾಧ್ಯತೆ ಇದೆ.