ಬೆಂಗಳೂರು: ‘ಹಗಲು ಎಚ್ಚರ, ರಾತ್ರಿ ಗಡದ್ದಾಗಿ ನಿದ್ದೆ...’ ಇದು ಇಂಥ ಸಮಯದಲ್ಲಿ ಜನರ ಮಾನಸಿಕ ಆರೋಗ್ಯ ಕಾಪಾಡುವ ದಿವ್ಯ ಔಷಧಿ ಎನ್ನುತ್ತಾರೆ ಮನೋವೈದ್ಯರು.
ಖಿನ್ನತೆಯಿಂದ ಬಳಲುತ್ತಿರುವ ಕೋವಿಡ್ ಶಂಕಿತರು ಮತ್ತು ಸೋಂಕಿತರಮನೋಬಲ ಹೆಚ್ಚಿಸಲು ಮನೋವೈದ್ಯರು ‘ಬಿಹೇವಿಯರಲ್ ಥೆರಪಿ’ ಮತ್ತು ‘ಸ್ಲೀಪ್ ಹೈಜಿನ್ಟೆಕ್ನಿಕ್’ ಅನುಸರಿಸುತ್ತಿದ್ದಾರೆ. ಇದು ಒಳ್ಳೆಯ ಫಲಿತಾಂಶವನ್ನೂ ನೀಡಿದೆ.
ಜೀವನಶೈಲಿಯಲ್ಲಿ ಹೇಗೆ ಸಕಾರಾತ್ಮಕ ಬದಲಾವಣೆ ಮಾಡಿಕೊಳ್ಳಬೇಕು ಎನ್ನುವ ಟಿಪ್ಸ್ಗಳನ್ನು ‘ಬಿಹೇವಿಯರಲ್ ಥೆರಪಿ’ಯಲ್ಲಿ ಹೇಳಿಕೊಡಲಾಗುತ್ತದೆ.
ಮನಸ್ಸನ್ನು ಸದಾ ಶಾಂತ ಮತ್ತುಪ್ರಫುಲ್ಲವಾಗಿಡಲು ಮನರಂಜನೆ, ಕ್ರೀಡೆ, ಯೋಗ, ಓದು, ಧ್ಯಾನ, ನೃತ್ಯ ಮತ್ತು ಸಂಗೀತದಂತಹ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುವಂತೆ ಕೋವಿಡ್–19 ಸೋಂಕಿತರಿಗ ಸಲಹೆ ನೀಡುತ್ತಿದ್ದೇವೆ ಎನ್ನುತ್ತಾರೆ ಕೆ.ಸಿ. ಜನರಲ್ ಆಸ್ಪತ್ರೆಯ ಮನೋವೈದ್ಯ ಡಾ. ಗಿರೀಶ್ ಕುಮಾರ್.
‘ಸ್ಲೀಪ್ ಹೈಜಿನ್ ಟೆಕ್ನಿಕ್’ ಇಂತಹಸಂದರ್ಭದಲ್ಲಿ ಬಹಳ ಉಪಯೋಗಕಾರಿ. ಇದು ನಿದ್ರೆಯ ಹತೋಟಿ ಕ್ರಿಯೆ. ಹಗಲು ಹೊತ್ತು ಮಲಗದೆ, ಆದಷ್ಟು ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಬೇಕು ಎನ್ನುವುದೇ ಇದರ ಮುಖ್ಯ ತಂತ್ರ.
ಬೆಳಿಗ್ಗೆಒಮ್ಮೆ ಹಾಸಿಗೆಯಿಂದ ಎದ್ದ ನಂತರ ಹಗಲು ಹೊತ್ತು ಮಲಗಬಾರದು. ರಾತ್ರಿಯೇ ಮಲಗಬೇಕು. ಹಗಲು ಮಲಗಿದರೆ ರಾತ್ರಿ ನಿದ್ರೆ ಬರಲ್ಲ. ಆಗ ಸಹಜವಾಗಿ ನಾನಾ ಚಿಂತೆ, ಅನಗತ್ಯ ವಿಚಾರಗಳು ತಲೆಗೆ ನುಸುಳತ್ತವೆ. ಏಕಾಂಗಿತನ ಕಾಡಲು ಶುರುವಾಗುತ್ತದೆ. ಆಗ ಇದು ಸಹಜವಾಗಿ ಆತಂಕ ಮತ್ತು ಮಾನಸಿಕ ಖಿನ್ನತೆಗೆ ದಾರಿ ಮಾಡಿಕೊಡುತ್ತದೆ.
‘ಸ್ಲೀಪ್ ಹೈಜಿನ್ ಟೆಕ್ನಿಕ್’ಅನ್ನು ಕೆ.ಸಿ. ಜನರಲ್ ಆಸ್ಪತ್ರೆಯ ಕೊರೊನಾ ಸೋಂಕಿತರ ಪ್ರತ್ಯೇಕ ವಾರ್ಡ್ನಲ್ಲಿ ಎಲ್ಲರಿಗೂ ಹೇಳಿಕೊಡಲಾಗುತ್ತದೆ. ಇದು ಉತ್ತಮ ಫಲಿತಾಂಶ ನೀಡುತ್ತಿದ್ದು, ಸೋಂಕಿತರಲ್ಲಿ ವಿಶ್ವಾಸ ಮೂಡಿಸಿದೆ ಎನ್ನುತ್ತಾರೆ ಡಾ. ಗೀರೀಶ್.
*
ಸಾಮಾಜಿಕ ಜಾಲತಾಣ ಮತ್ತು ವಾಟ್ಸ್ಆ್ಯಪ್ನಲ್ಲಿಈಚೆಗೆ ಕೊರೊನಾಕ್ಕೆ ಸಂಬಂಧಿಸಿದ ಸುದ್ದಿಗಳುಪ್ರವಾಹದಂತೆ ಹರಿದು ಬರುತ್ತಿವೆ. ದಿನವಿಡಿ ಮೊಬೈಲ್ನಲ್ಲಿ ಇವನ್ನು ವೀಕ್ಷಿಸುವ ಜನರು ರಾತ್ರಿ ಮಲಗಿದಾಗ ಬೆಚ್ಚಿ ಬೀಳುತ್ತಾರೆ. ಇದನ್ನು ಮೊದಲು ಬದಲಾಯಿಸಿಕೊಳ್ಳಬೇಕು. -ಡಾ.ಗೀರೀಶ್ ಕುಮಾರ್,ಮನೋವೈದ್ಯರು, ಕೆ.ಸಿ. ಜನರಲ್ ಆಸ್ಪತ್ರೆ