ಬೆಂಗಳೂರು: ‘ಕಾಂಗ್ರೆಸ್ ಪಕ್ಷದಲ್ಲಿ ಆಗುತ್ತಿರುವ ಅನ್ಯಾಯ ಸರಿಪಡಿಸಿ, ಪಕ್ಷವನ್ನು ಉಳಿಸಬೇಕು’ ಎಂದು ಸಮಾನ ಮನಸ್ಕರ ಸಭೆಯಲ್ಲಿ ಆಗ್ರಹಿಸಲಾಯಿತು.
ರಾಜಾಜಿನಗರ ವಿಧಾನಸಭಾ ಕ್ಷೇತ್ರದ ರಾಮಮಂದಿರದ ಸೀತಾರಾಮ ಕಲ್ಯಾಣ ಮಂಟಪದಲ್ಲಿ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು ಹಾಗೂ ಸಮಾನ ಮನಸ್ಕರ ಸಭೆ ನಡೆಯಿತು.
ಮಾಜಿ ಉಪ ಮೇಯರ್ ಬಿ.ಎಸ್. ಪುಟ್ಟರಾಜು ಮಾತನಾಡಿ, ‘ರಾಜಾಜಿನಗರ ವಿಧಾನಸಭಾ ಕ್ಷೇತ್ರದಲ್ಲಿ ಮನೆ ಮಾಡಿಕೊಂಡು ವಾಸವಾಗಿದ್ದೇನೆ. ನಾನು ಕಾಂಗ್ರೆಸ್ ಪಕ್ಷದ ಟಿಕೆಟ್ ಆಕಾಂಕ್ಷಿಯಾಗಿದ್ದೇನೆ. ನಿಷ್ಠಾವಂತ ಕಾರ್ಯಕರ್ತರಿಗೆ ಟಿಕೆಟ್ ನೀಡಿ ಎಂಬುದು ಆಗ್ರಹ. ಕಾರ್ಯಕರ್ತರ ಮತ್ತು ಸಾರ್ವಜನಿಕರ ಅಭಿಪ್ರಾಯ ಸಂಗ್ರಹಿಸಿ, ತೀರ್ಮಾನ ಕೈಗೊಳ್ಳಲಾಗುವುದು ’ ಎಂದರು.
‘ಇನ್ನು ಒಂದು ವಾರ ಕಾಲ ಕಾರ್ಯಕರ್ತರು ಮತ್ತು ಜನರು ಅಭಿಪ್ರಾಯ ತಿಳಿಸಿ.ನಿಮ್ಮ ಅಭಿಪ್ರಾಯದಂತೆ ನಡೆಯುತ್ತೇವೆ’ ಎಂದು ಹೇಳಿದರು.
ರಾಜಾಜಿನಗರ ವಿಧಾನಸಭಾ ಕ್ಷೇತ್ರದ ಟಿಕೆಟ್ ಆಕಾಂಕ್ಷಿಗಳಾದ ಮನೋಹರ್, ರಘುವೀರ್ ಎಸ್. ಗೌಡ, ಬಿಬಿಎಂಪಿ ಮಾಜಿ ಸದಸ್ಯರಾದ ಜಿ.ಕೃಷ್ಣಮೂರ್ತಿ, ಎಂ.ಬಿ.ಮೋಹನ್ ಕುಮಾರ್, ವಿಜಯಕುಮಾರ್, ಮುಖಂಡರಾದ ರಾಕೇಶ್, ಸುಧಾಕರ್ ಅವರು ವೇದಿಕೆಯಲ್ಲಿದ್ದರು.