ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇತಿಹಾಸ ಮುಚ್ಚಿಡುವ ಕೆಲಸ ಮಾಡದಿರಿ: ಡಾ.ಬಂಜಗೆರೆ ಜಯಪ್ರಕಾಶ್

Last Updated 22 ಫೆಬ್ರುವರಿ 2021, 21:09 IST
ಅಕ್ಷರ ಗಾತ್ರ

ಬೆಂಗಳೂರು: ‘ಬೌದ್ಧ ಮತ್ತು ಜೈನ ಧರ್ಮಗಳ ಹುಟ್ಟಿನ ಕುರಿತ ಪಾಠಗಳು ಪರೀಕ್ಷೆಗೆ ಅಗತ್ಯವಿಲ್ಲ ಎಂದುಶಿಕ್ಷಣ ಇಲಾಖೆ ಹೇಳಿರುವುದು ತಪ್ಪು. ಇತಿಹಾಸ ನಡೆದು ಬಂದ ದಾರಿಯನ್ನು ಎಲ್ಲರೂ ತಿಳಿಯುವುದು ಅಗತ್ಯ. ಇತಿಹಾಸವನ್ನೇ ಮುಚ್ಚಿಡುವ ಕೆಲಸ ಮಾಡಬಾರದು’ ಎಂದು ವಿಮರ್ಶಕ ಡಾ.ಬಂಜಗೆರೆ ಜಯಪ್ರಕಾಶ್ ತಿಳಿಸಿದರು.

ಜಾಣಗೆರೆ ಪತ್ರಿಕಾ ಪ್ರಕಾಶನ ಹಾಗೂಸಾಹಿತ್ಯ ಸಂಗಮ ಟ್ರಸ್ಟ್‌ನ ಸಹಯೋಗದಲ್ಲಿ ಆಯೋಜಿಸಿದ್ದ ಲೇಖಕ ಜಾಣಗೆರೆ ವೆಂಕಟರಾಮಯ್ಯ ಅವರ ‘ಜಲಯುದ್ಧ’ ಕಾದಂಬರಿ ಬಿಡುಗಡೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ಅಧಿಕಾರದಲ್ಲಿರುವವರು ಜನರ ಅಭಿವೃದ್ಧಿಗಾಗಿ ಆಡಳಿತ ನಡೆಸಿದರೆ, ಅವರು ಜನರ ಮನಸ್ಸಿನಲ್ಲಿ ಉಳಿಯುತ್ತಾರೆ. ‌ಅಧಿಕಾರವನ್ನು ಸ್ವಾರ್ಥಕ್ಕಾಗಿ ಬಳಸಿಕೊಂಡರೆ ಅವರ ದುಷ್ಟತನ ತೋರುತ್ತದೆ’ ಎಂದರು.

‘ಶತಮಾನಗಳಿಂದಲೂರಾಜ್ಯವು ಜಲ ಮತ್ತು ಗಡಿ ವಿಚಾರಗಳಲ್ಲಿ ಸಂಕಷ್ಟ ಮತ್ತು ಸಂಘರ್ಷ ಎದುರಿಸುತ್ತಲೇ ಬಂದಿದೆ. ಬ್ರಿಟಿಷ್ ಸರ್ಕಾರ ಹಾಗೂ ನಂತರದ ನಮ್ಮ ಸರ್ಕಾರಗಳು ಮಾಡಿದ ನಿರ್ಲಕ್ಷ್ಯ ಹಾಗೂ ವಂಚನೆಗಳಿಂದ ನೀರಿನ ಸಮಸ್ಯೆ ಇಂದಿಗೂ ಕೊನೆಗೊಂಡಿಲ್ಲ. ಜಾಣಗೆರೆ ವೆಂಕಟರಾಮಯ್ಯ ಅವರ ಈ ಕಾದಂಬರಿ ಜಲ ವಿವಾದದ ಕುರಿತು ಒಂದು ಸೂಚನೆ ನೀಡಿದೆ’ ಎಂದು ಹೇಳಿದರು.

ಸಾಹಿತಿ ಡಾ.ಹಂಪ ನಾಗರಾಜಯ್ಯ,‘ನಾಡಿನಲ್ಲಿ ನದಿಯ ಉಳಿವಿಗಾಗಿ ಕದನಗಳು ನಡೆದಿವೆ. ನದಿ ತೀರಗಳಲ್ಲಿ ಸಾಮ್ರಾಜ್ಯ ಕಟ್ಟಿಕೊಳ್ಳುತ್ತಿದ್ದ ರಾಜರೂ ಅದರ ಉಳಿವಿಗಾಗಿ ಯುದ್ಧ ನಡೆಸಿದ್ದಾರೆ. ಈ ಕುರಿತು ‘ಕವಿರಾಜ ಮಾರ್ಗ’ದಲ್ಲಿ ಕಾವೇರಿಯಿಂದ ಗೋದಾವರಿವರೆಗೆ ಕನ್ನಡ ನಾಡನ್ನು ಗುರುತಿಸಲಾಗಿದೆ’ ಎಂದರು.

ವಿಮರ್ಶಕ ಬೈರಮಂಗಲ ರಾಮೇಗೌಡ, ‘ಹಲವು ರಾಜ್ಯಗಳ ಜೊತೆಗೆ ಗಡಿ ಹಂಚಿಕೊಂಡಿರುವ ಏಕೈಕ ರಾಜ್ಯ ನಮ್ಮದು. ಹಾಗಾಗಿ, ಜಲ, ಗಡಿ ಮತ್ತು ಭಾಷೆಯ ಸಮಸ್ಯೆ ಉದ್ಭವಿಸಿದೆ. ದಿಕ್ಕು ತಪ್ಪುತ್ತಿರುವ ಆಡಳಿತ ವ್ಯವಸ್ಥೆಯನ್ನು ಜನರೇ ಸರಿಯಾದ ದಾರಿಗೆ ತರಬೇಕಿದೆ’ ಎಂದರು.

ಲೇಖಕ ಜಾಣಗೆರೆ ವೆಂಕಟರಾಮಯ್ಯ,‘ಕನ್ನಡಿಗರು ಜಲವಿವಾದ ಹೋರಾಟ ಮಾಡಿಕೊಂಡೇ ಬಂದಿದ್ದಾರೆ. ಅಂದಿನ ತಪ್ಪು ನಿರ್ಧಾರಗಳಿಂದ ಆಗಿರುವ ಸಮಸ್ಯೆಗಳಿಗೆ ಪುಸ್ತಕದಲ್ಲಿ ಎಚ್ಚರಿಕೆಯ ಸಂದೇಶವೂ ನೀಡಿದ್ದೇನೆ’ ಎಂದು ಅವರು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT