ಬೆಂಗಳೂರು: ‘ನೀವು ಹೇಳುತ್ತಿರುವುದೆಲ್ಲ ಅನುಷ್ಠಾನ ಆಗಿದ್ದರೆ ನಾನು ರಾಜೀನಾಮೆ ಕೊಡಲು ಸಿದ್ಧ’ ಎಂದು ಸಣ್ಣ ನೀರಾವರಿ ಸಚಿವ ಜೆ.ಸಿ.ಮಾಧುಸ್ವಾಮಿ ಉಪ ಮುಖ್ಯಮಂತ್ರಿ ಡಾ.ಸಿ.ಎನ್.ಅಶ್ವತ್ಥನಾರಾಯಣ ಅವರನ್ನು ಉದ್ದೇಶಿಸಿ ಸಚಿವ ಸಂಪುಟ ಸಭೆಯಲ್ಲಿ ಲಘು ಧಾಟಿಯಲ್ಲಿ ಹೇಳಿದರು.
ಕೋವಿಡ್ ನಿರ್ವಹಣೆ ಕುರಿತು ಚರ್ಚೆ ನಡೆಯುವಾಗ ಅಶ್ವತ್ಥನಾರಾಯಣ ಅವರು, ಹಾಸನ ವೈದ್ಯಕೀಯ ವಿಜ್ಞಾನ ಸಂಸ್ಥೆಯ ಮಾಹಿತಿ ನೀಡುತ್ತಿದ್ದರು.
ಆಗ ಮಧ್ಯ ಪ್ರವೇಶಿಸಿದ ಮಾಧುಸ್ವಾಮಿ, ‘ನೀವು ಹೇಳುತ್ತಿರುವುದೆಲ್ಲ ದಾಖಲೆ ಪತ್ರದಲ್ಲಿ ಮಾತ್ರ ಇದೆ. ಅವೆಲ್ಲ ಜಾರಿ ಆಗಿಲ್ಲ. ನೀವು ಹೇಳಿದ್ದೆಲ್ಲ ನಿಜವೇ ಆಗಿದ್ದರೆ, ರಾಜಿನಾಮೆ ಕೊಡಲು ಸಿದ್ಧ ಎಂದು ಚಟಾಕಿ ಹಾರಿಸಿದರು’ ಎಂದು ಮೂಲಗಳು ತಿಳಿಸಿವೆ.
‘ರಾಜೀನಾಮೆ’ ಪದ ಕಿವಿಗೆ ಬೀಳುತ್ತಿದ್ದಂತೆ ಎಚ್ಚೆತ್ತುಕೊಂಡ ಮುಖ್ಯಮಂತ್ರಿ ಯಡಿಯೂರಪ್ಪ ಅವರು, ‘ಮಾಧುಸ್ವಾಮಿ ಸುಮ್ಮನೆ ಇರಿ’ ಎಂದು ಹೇಳಿ ಸಮಾಧಾನಪಡಿಸಿದರು.
ಈಚೆಗೆ ಮುಖ್ಯಮಂತ್ರಿಯವರು ಜಿಲ್ಲಾಧಿಕಾರಿಗಳ ವಿಡಿಯೊ ಸಂವಾದ ನಡೆಸುವಾಗಲೂ, ಅಧಿಕಾರಿಗಳು ಮತ್ತು ಆರೋಗ್ಯ ಸಚಿವರ ವಿರುದ್ಧ ಮಾಧುಸ್ವಾಮಿ ಕಿಡಿಕಾರಿದ್ದರು.