ಬೆಂಗಳೂರು: ಕೋವಿಡ್ ರೋಗಿಗಳಿಗೆ ಸಮರ್ಪಕವಾಗಿ ಹಾಸಿಗೆ, ಐಸಿಯು, ವೆಂಟಿಲೇಟರ್ ವ್ಯವಸ್ಥೆ ಮಾಡುವಂತೆ ಆಗ್ರಹಿಸಿ ಶಾಸಕಿ ಸೌಮ್ಯಾರೆಡ್ಡಿ ಅವರು ಜಯನಗರ 2ನೇ ಬ್ಲಾಕ್ನಲ್ಲಿರುವ ಪಾಲಿಕೆ ಜಂಟಿ ಆಯುಕ್ತರ ಕಚೇರಿ ಎದುರು ಬುಧವಾರ ಧರಣಿ ನಡೆಸಿದರು.
ಜಯನಗರ ವ್ಯಾಪ್ತಿಯಲ್ಲಿ ಹಾಸಿಗೆ ಸಿಗದೆ, ಆಸ್ಪತ್ರೆಗಳಲ್ಲಿ ಚಿಕಿತ್ಸೆ ಸಿಗದೆ ಮೃತಪಟ್ಟ ಕೊರೊನಾ ರೋಗಿಗಳ ವಿವರಗಳನ್ನು ಪ್ರದರ್ಶಿಸಿ ಧರಣಿ ಕುಳಿತರು.
ಧರಣಿ ವೇಳೆ ಪಾಲಿಕೆ ಆಯುಕ್ತ ಗೌರವ್ ಗುಪ್ತ ಅವರಿಗೆ ಕರೆ ಮಾಡಿದ ಅವರು, ‘ಜಯನಗರ ಕ್ಷೇತ್ರ ವ್ಯಾಪ್ತಿಯಲ್ಲಿಯೇ 200 ಜನ ಆಮ್ಲಜನಕದ ವ್ಯವಸ್ಥೆಯಿರುವ ಬೆಡ್ ಸಿಗದೆ ಒದ್ದಾಡುತ್ತಿದ್ದಾರೆ. ಮೂರು ದಿನಗಳಿಂದ ಜಯನಗರ ವ್ಯಾಪ್ತಿಗೆ ರೆಮ್ಡಿಸಿವರ್ ಸರಬರಾಜು ನಿಂತು ಹೋಗಿದೆ’ ಎಂದರು.
ಸ್ಥಳಕ್ಕೆ ಬಂದ ಪೊಲೀಸರು ಧರಣಿ ಕೈಬಿಡುವಂತೆ ವಿನಂತಿಸಿದರು. ಆದರೆ, ಅವರು ಧರಣಿ ಕೈಬಿಡಲಿಲ್ಲ. ಕೊನೆಗೆ ಸೌಮ್ಯಾ ಹಾಗೂ ಧರಣಿಯಲ್ಲಿ ಕುಳಿತಿದ್ದ ಹಲವರನ್ನು ವಶಕ್ಕೆ ಪಡೆದರು.