ಬೆಂಗಳೂರು: ಕೋವಿಡ್ ಪರೀಕ್ಷೆಯಲ್ಲಿ ಸೋಂಕು ದೃಢಪಟ್ಟಿಲ್ಲ ಎಂದು ವರದಿ ನೀಡುವ ಸಲುವಾಗಿ ಲಂಚ ಪಡೆಯುತ್ತಿದ್ದ ಹಗರಣ ಪತ್ತೆಯಾಗಿದೆ. ಇದರ ಬೆನ್ನಲ್ಲೇ, ಈ ಆರೋಪ ಎದುರಿಸುತ್ತಿರುವ ವೈದ್ಯಾಧಿಕಾರಿ, ಆಶಾ ಕಾರ್ಯಕರ್ತೆ ಹಾಗೂ ಪ್ರಯೋಗಾಲಯದ ತಾಂತ್ರಿಕ ಸಿಬ್ಬಂದಿಯನ್ನು ಬಿಬಿಎಂಪಿ ಸೇವೆಯಿಂದ ವಜಾಗೊಳಿಸಲಾಗಿದೆ.
ಬಿಬಿಎಂಪಿಯ ಪೊಬ್ಬತ್ತಿ ಆರೋಗ್ಯ ಕೇಂದ್ರದಲ್ಲಿ ಕಾರ್ಯನಿರ್ವಹಿಸುತ್ತಿದ್ದ ಆಶಾ ಕಾರ್ಯಕರ್ತೆಶಾಂತಿ ಹಾಗೂ ಪ್ರಯೋಗಾಲಯದ ತಾಂತ್ರಿಕ ಸಿಬ್ಬಂದಿ ಮಹಾಲಕ್ಷ್ಮಿ ಅವರು ಕೋವಿಡ್ ಪರೀಕ್ಷೆಗಾಗಿ ಗಂಟಲ ಹಾಗೂ ಮೂಗಿನ ದ್ರವ ಸಂಗ್ರಹಿಸುವಾಗ ಸರ್ಕಾರದ ಮಾರ್ಗಸೂಚಿಗಳನ್ನು ಪಾಲಿಸುತ್ತಿರಲಿಲ್ಲ. ಪರೀಕ್ಷೆಗೆ ಒಳಗಾದವರು ಬಯಸಿದರೆ ಅವರಿಂದ ₹ 2500 ಲಂಚ ಪಡೆದು ಸೋಂಕು ಪತ್ತೆಯಾಗಿಲ್ಲ ಎಂದು ತಿರುಚಿದ ವರದಿ ಬರುವಂತೆ ಮಾಡಲು ಸಂಚು ರೂಪಿಸುತ್ತಿದ್ದರು. ಅವರು ವ್ಯಕ್ತಿಯೊಬ್ಬರಿಂದ ₹ 2500 ಲಂಚ ಪಡೆದು ಅವರಿಗೆ ಕೋವಿಡ್ ಸೋಂಕಿಲ್ಲ ಎಂದು ವರದಿ ನೀಡಿರುವ ಬಗ್ಗೆ ಖಾಸಗಿ ಟಿ.ವಿ ವಾಹಿನಿ ಸುದ್ದಿ ಪ್ರಕಟಿಸಿತ್ತು. ಈ ಬಗ್ಗೆ ಪರಿಶೀಲಿಸಿದಾಗ ಈ ಸಿಬ್ಬಂದಿ ವಿರುದ್ಧದ ಆರೋಪ ದೃಢಪಟ್ಟಿತ್ತು. ಹಾಗಾಗಿ ಅವರಿಬ್ಬರನ್ನೂ ಸೇವೆಯಿಂದ ವಜಾಗೊಳಿಸಿ ಬಿಬಿಎಂಪಿ ದಕ್ಷಿಣ ವಲಯದ ಜಂಟಿ ಆಯುಕ್ತರು ಹಾಗೂ ಆರೋಗ್ಯಾಧಿಕಾರಿ ಅವರು ಮಂಗಳವಾರ ಆದೇಶ ಹೊರಡಿಸಿದ್ದಾರೆ.
ಪೊಬ್ಬತ್ತಿ ಆರೋಗ್ಯ ಕೇಂದ್ರದಲ್ಲಿ ಗುತ್ತಿಗೆ ಆಧಾರದ ಮೇಲೆ ಕರ್ತವ್ಯ ನಿರ್ವಹಿಸುತ್ತಿದ್ದ ವೈದಾಧಿಕಾರಿ ಡಾ. ಶೈಲಜಾ ಅವರೂ ಕೋವಿಡ್ ಪರೀಕ್ಷೆಗೆ ಸಂಬಂಧಿಸಿದ ಕರ್ತವ್ಯ ಪಾಲನೆಯಲ್ಲಿ ನಿರ್ಲಕ್ಷ್ಯ ವಹಿಸಿದ್ದು, ಅವರನ್ನೂ ಪಾಲಿಕೆ ಸೇವೆಯಿಂದ ಬಿಡುಗಡೆಗೊಳಿಸಲಾಗಿದೆ ಎಂದು ಜಂಟಿ ಆಯುಕ್ತರು ( ದಕ್ಷಿಣ) ರವರು ತಿಳಿಸಿದ್ದಾರೆ.