ಬಾಲಕಿಯೊಂದಿಗೆ ಮದುವೆ ಮಾಡಿಸಿದ ಸ್ನೇಹಿತರು: ಪ್ರಕರಣ ದಾಖಲು

ಬೆಂಗಳೂರು: ಸಾಮಾಜಿಕ ಜಾಲತಾಣದಲ್ಲಿ ಪರಿಚಯವಾಗಿದ್ದ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿನಿಯನ್ನು ಪ್ರೇಮಿಸಿದ್ದ ಹುಡುಗನೊಂದಿಗೆ ಸ್ನೇಹಿತರಿಬ್ಬರು ಸೇರಿ ಮದುವೆ ಮಾಡಿಸಿದ ಘಟನೆ ನಡೆದಿದ್ದು, ಈ ಸಂಬಂಧ ಇಬ್ಬರನ್ನು ಹನುಮಂತನಗರ ಪೊಲೀಸರು ಬಂಧಿಸಿದ್ದಾರೆ.
‘ವಿದ್ಯಾರ್ಥಿನಿಯ ಪೋಷಕರು ನೀಡಿದ ದೂರಿನ ಮೇರೆಗೆ ವಿದ್ಯಾರ್ಥಿಯನ್ನು ಮದುವೆಯಾಗಿದ್ದ ಲಗ್ಗೆರೆಯ ದರ್ಶನ್ ಹಾಗೂ ಮದುವೆ ಮಾಡಿಸಿದ್ದ ವಿಜಯನಗರದ ಚಂದ್ರು ಎಂಬ ಯುವಕರನ್ನು ಬಂಧಿಸಲಾಗಿದೆ. ಇದರಲ್ಲಿ ಭಾಗಿಯಾಗಿದ್ದ ಗಿರೀಶ್ ತಲೆಮರೆಸಿಕೊಂಡಿದ್ದಾನೆ’ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
‘ಕಳೆದ ವರ್ಷ ಲಾಕ್ಡೌನ್ ವೇಳೆ ಶ್ರೀನಗರದಲ್ಲಿ ವಾಸವಿದ್ದ ವಿದ್ಯಾರ್ಥಿನಿಗೆ ಆನ್ಲೈನ್ ತರಗತಿಗಾಗಿ ಪೋಷಕರು ಮೊಬೈಲ್ ಕೊಡಿಸಿದ್ದರು. ಆಕೆ ಇನ್ಸ್ಟಾಗ್ರಾಂ ಹಾಗೂ ಫೇಸ್ಬುಕ್ನಲ್ಲಿ ಖಾತೆ ತೆರೆದಿದ್ದಳು. ಇನ್ಸ್ಟಾಗ್ರಾಂ ಮೂಲಕ ದರ್ಶನ್ನ ಪರಿಚಯವಾಗಿ ಪ್ರೀತಿಸುತ್ತಿದ್ದರು’.
‘ಈ ವಿಚಾರವನ್ನು ದರ್ಶನ್ ತನ್ನ ಸ್ನೇಹಿತ ಚಂದ್ರು ಬಳಿ ಹೇಳಿಕೊಂಡಿದ್ದ. ಇಬ್ಬರಿಗೂ ಮದುವೆ ಮಾಡಿಸುವುದಾಗಿ ತಿಳಿಸಿದ್ದ ಚಂದ್ರ, ಗಿರೀಶ್ನನ್ನು ಬೆಂಗಳೂರಿಗೆ ಕರೆಸಿಕೊಂಡಿದ್ದ. ಜೂನ್ನಲ್ಲಿ ವಿದ್ಯಾರ್ಥಿನಿಗೆ ಮನೆ ಬಿಟ್ಟು ಬರುವಂತೆ ಹೇಳಿ, ದೇವಸ್ಥಾನವೊಂದರಲ್ಲಿ ಮದುವೆ ಮಾಡಿಸಿದ್ದರು. ಬಳಿಕ ವಿಜಯನಗರದಲ್ಲಿ ಮನೆಯ ವ್ಯವಸ್ಥೆಯೂ ಮಾಡಿದ್ದರು.’
‘ಮಗಳು ಮನೆಗೆ ವಾಪಸ್ ಆಗದ ಕಾರಣ ಪೋಷಕರು ಠಾಣೆಗೆ ದೂರು ನೀಡಿದ್ದರು. ವಿದ್ಯಾರ್ಥಿನಿಯ ಇನ್ಸ್ಟಾಗ್ರಾಂ ಖಾತೆಯ ನೆರವಿನಿಂದ ಅವರನ್ನು ಪತ್ತೆ ಹಚ್ಚಲಾಯಿತು. ಬಾಲಕಿಯನ್ನು ಪೋಷಕರಿಗೆ ಒಪ್ಪಿಸಲಾಗಿದ್ದು, ಆರೋಪಿಗಳ ವಿರುದ್ಧ ಬಾಲ್ಯವಿವಾಹ, ಅಪಹರಣ ಹಾಗೂ ಪೋಕ್ಸೊ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ’ ಎಂದೂ ಮೂಲಗಳು ಹೇಳಿವೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.