ಕೆಂಗೇರಿ: ‘ದೃಢ ಸಂಕಲ್ಪ ಹಾಗೂ ಶ್ರಮದೊಂದಿಗೆ ಸರಳತೆ, ಸಜ್ಜನಿಕೆ ಮೈಗೂಡಿಸಿಕೊಂಡರೆ ಯಶಸ್ಸು ನಮ್ಮದಾಗುತ್ತದೆ’ ಎಂದು ಆದಿಚುಂಚನಗಿರಿ ಮಠದ ಪೀಠಾಧಿಪತಿ ನಿರ್ಮಲಾನಂದನಾಥ ಸ್ವಾಮೀಜಿ ಹೇಳಿದರು.
ಬಿಜಿಎಸ್ ಸಮೂಹ ಸಂಸ್ಥೆಗಳ ವತಿಯಿಂದ ಆಯೋಜಿಸಲಾಗಿದ್ದ ಬಿಜಿಎಸ್ ಸಂಸ್ಥಾಪಕರ ದಿನಾಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಶಿಕ್ಷಣಕ್ಕೆ ನೀಡುವ ಮಹತ್ವ ಕ್ರೀಡೆಗೂ ದೊರೆಯಬೇಕು. ಕ್ರೀಡೆ ನಮ್ಮ ಮಾನಸಿಕ ಹಾಗೂ ದೈಹಿಕ ಆರೋಗ್ಯ ವೃದ್ದಿಸುವುದರೊಂದಿಗೆ ದೇಶದ ಬೆಳವಣಿಗೆಯಲ್ಲೂ ಪ್ರಮುಖ ಪಾತ್ರ ವಹಿಸಲಿದೆ ಎಂದು ವಿಧಾನ ಪರಿಷತ್ ಸದಸ್ಯ ಎನ್.ಗೋವಿಂದರಾಜು ಹೇಳಿದರು.
ಚಿತ್ರನಟ ಯಶ್ ಮಾತನಾಡಿ, ‘ಒಬ್ಬ ವ್ಯಕ್ತಿಯ ಅವಿರತ ಶ್ರಮ, ಬದ್ಧತೆಯಿಂದ ಒಂದು ಉತ್ತಮ ಸಂಸ್ಥೆ ರೂಪುಗೊಳ್ಳಲು ಸಾಧ್ಯ. ಅದೇ ರೀತಿ ಬಾಲಗಂಗಾಧರ ಸ್ವಾಮೀಜಿ ಅವರ ಅವಿರತ ಪ್ರಯತ್ನದಿಂದ ಬಿಜಿಎಸ್ ದೇಶದ ಉನ್ನತ ಶಿಕ್ಷಣ ಸಂಸ್ಥೆಯಾಗಿ ರೂಪುಗೊಂಡಿದೆ’ ಎಂದು ಶ್ಲಾಘಿಸಿದರು.
ಬಿಜಿಎಸ್ ಸಂಸ್ಥೆಯ ಸಾಧಕ ಪ್ರಾಧ್ಯಾಪಕರಾದ ಸವಿತಾ ಸುವರ್ಣ ಹಾಗೂ ಶಾಂತಕುಮಾರ್ ಅವರಿಗೆ ಸೇವಾರತ್ನ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಬಿಜಿಎಸ್ ಮತ್ತು ಎಸ್ಜೆಬಿ ಸಮೂಹ ಸಂಸ್ಥೆಗಳ ವ್ಯವಸ್ಥಾಪಕ ನಿರ್ದೇಶಕ ಪ್ರಕಾಶನಾಥ ಸ್ವಾಮೀಜಿ, ಶಾಸಕ ಎಸ್.ಟಿ.ಸೋಮಶೇಖರ್ ಇದ್ದರು.