ಯಲಹಂಕ: ಹೈದರಾಬಾದ್ ಪ್ರಾದೇಶಿಕ ವಲಯದ ನವೋದಯ ವಿದ್ಯಾಲಯ ಸಮಿತಿ ಆಶ್ರಯದಲ್ಲಿ ಬಾಗಲೂರಿನ ಜವಾಹರ್ ನವೋದಯ ವಿದ್ಯಾಲಯದಲ್ಲಿ ಆಯೋಜಿಸಿರುವ ಮೂರು ದಿನಗಳ ರಾಷ್ಟ್ರೀಯ ಬಿಲ್ಲುಗಾರಿಕೆ ಕೂಟ ಬುಧವಾರ ಆರಂಭಗೊಂಡಿತು.
ಕೂಟಕ್ಕೆ ಚಾಲನೆ ನೀಡಿದ ವಿಧಾನಪರಿಷತ್ ಸದಸ್ಯ ಎಚ್.ಎಸ್. ಗೋಪಿನಾಥ್ ರೆಡ್ಡಿ ಮಾತನಾಡಿ, ‘ಬಿಲ್ಲುಗಾರಿಕೆ ಭಾರತೀಯ ಪ್ರಾಚೀನ ಮತ್ತು ಪಾರಂಪರಿಕ ಕಲೆಗಳಲ್ಲಿ ಒಂದು. ಈ ಸಾಂಪ್ರದಾಯಿಕ ಶಸ್ತ್ರ ಕಲೆಯನ್ನು ಕ್ರೀಡೆಯಾಗಿ ಉಳಿಸಿ, ಬೆಳೆಸುವ ಮೂಲಕ ಇಂದಿನ ಯುವಸಮುದಾಯಕ್ಕೆ ಪರಿಚಯಿಸುತ್ತಿರುವುದು ನವೋದಯ ವಿದ್ಯಾಲಯದ ಕಾರ್ಯ ಶ್ಲಾಘನೀಯ’ ಎಂದು ತಿಳಿಸಿದರು.
ಬಾಗಲೂರು ಗ್ರಾಮ ಪಂಚಾಯಿತಿ ಅಧ್ಯಕ್ಷೆ ರೀತಿ ಮುನೇಗೌಡ ಮಾತನಾಡಿ, ‘ಮಕ್ಕಳು ಬಿಲ್ಲುಗಾರಿಕೆಯಲ್ಲಿ ತೊಡಗಿಸಿಕೊಳ್ಳುವುದರಿಂದ ಏಕಾಗ್ರತೆ ಮೂಡುತ್ತದೆ. ಜೊತೆಗೆ ತಮ್ಮ ಕಾರ್ಯಗಳಲ್ಲಿ ಗುರಿ ಮುಟ್ಟಲು ಸಾಧ್ಯ’ ಎಂದರು.
ಬಿಲ್ಲುಗಾರಿಕೆ ಕೂಟದಲ್ಲಿ ಬೋಪಾಲ್, ಜೈಪುರ್, ಲಖನೌ, ಪಾಟ್ನಾ, ಪುಣೆ, ಶಿಲ್ಲಾಂಗ್ ಹಾಗೂ ಹೈದರಾಬಾದ್ ವಲಯಗಳ 136 ಸ್ವರ್ಧಿಗಳು ಪಾಲ್ಗೊಂಡಿದ್ದಾರೆ. 14, 17 ಮತ್ತು 19 ವರ್ಷದೊಳಗಿನ ಬಾಲಕ ಮತ್ತು ಬಾಲಕಿಯರ ವಿಭಾಗಗಳಲ್ಲಿ ಪ್ರತ್ಯೇಕವಾಗಿ ಸ್ಪರ್ಧೆ ನಡೆಯಲಿವೆ ಎಂದು ಪ್ರಾಂಶುಪಾಲ ಎಸ್.ಕಣ್ಣನ್ ಮಾಹಿತಿ ನೀಡಿದರು.
ನವೋದಯ ವಿದ್ಯಾಲಯದ ಹೈದರಾಬಾದ್ ಪ್ರಾದೇಶಿಕ ವಲಯದ ಸಹಾಯಕ ಆಯುಕ್ತರಾದ ಸಿ.ವಿ. ಶಾಂತಿ, ತಾಲ್ಲೂಕು ಪಂಚಾಯಿತಿ ಮಾಜಿ ಅಧ್ಯಕ್ಷ ಎಂ. ನಾಗರಾಜ್, ಮಾರೇನಹಳ್ಳಿ ಗ್ರಾಮ ಪಂಚಾಯಿತಿ ಅಧ್ಯಕ್ಷ ವಿ. ನಂಜೇಗೌಡ, ಸದಸ್ಯರಾದ ಜೆ. ಮುನೇಗೌಡ, ಬಿ. ಧನಂಜಯ, ಬಿ.ಎಸ್. ಪ್ರಭುಸ್ವಾಮಿ, ಹೇಮಲತಾ ಅನಿಲ್ ಕುಮಾರ್, ಬಿ.ಐ.ಎಂ.ಎಸ್ ಕಾಲೇಜಿನ ಅಧ್ಯಕ್ಷ ಎಂ.ಸುರೇಶ್ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.