ಬೆಂಗಳೂರು: ‘ಯಾವುದೇ ರೀತಿಯ ಆಮಿಷಕ್ಕೆ ಒಳಗಾಗದೆ ಸ್ವಇಚ್ಛೆಯಿಂದ ಮತದಾನ ಮಾಡಬೇಕು’ ಎಂದು ಜಿಲ್ಲಾ ಚುನಾವಣಾಧಿಕಾರಿ ತುಷಾರ್ ಗಿರಿನಾಥ್ ಅವರು ಮತದಾರರಿಗೆ ಮನವಿ ಮಾಡಿದರು.
ಮಹದೇವಪುರದಲ್ಲಿ ಕೃಪಾನಿಧಿ ಗ್ರೂಪ್ ಆಫ್ ಇನ್ಸ್ಟಿಟ್ಯೂಟ್ನಲ್ಲಿ ಮತದಾನ ಜಾಗೃತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
‘ಲೋಕಸಭಾ ಚುನಾವಣೆಯಲ್ಲಿ ನಾವೆಲ್ಲರೂ ಮತದಾನದ ಪ್ರಮಾಣವನ್ನು ಹೆಚ್ಚಿಸಬೇಕು. ನಿಮಗೆ ಮತದಾನ ಮಾಡುವ ಮನಸ್ಸಿದ್ದು, ಅದರ ಬಗ್ಗೆ ಅರಿವಿಲ್ಲ ಎಂದಾದರೆ ‘ವೋಟರ್ ಹೆಲ್ಪ್ ಲೈನ್’ ತಂತ್ರಾಂಶವನ್ನು ಡೌನ್ಲೋಡ್ ಮಾಡಿಕೊಳ್ಳಬೇಕು. ನಂತರ ತಂತ್ರಾಂಶದಲ್ಲಿ ನಿಮ್ಮ ಮತದಾರರ ಗುರುತಿನ ಚೀಟಿಯ ಸಂಖ್ಯೆ ನಮೂಸಿದರೆ, ಎಲ್ಲಾ ಮಾಹಿತಿ ನಿಮಗೆ ಸಿಗಲಿದೆ’ ಎಂದು ಹೇಳಿದರು.
‘ನಿಮ್ಮ ಹೆಸರು ಮತದಾರರ ಪಟ್ಟಿಯಲ್ಲಿದ್ದು, ನೀವು ಮತದಾನ ಮಾಡದಿದ್ದರೆ ತಪ್ಪಾಗುತ್ತದೆ. ಇನ್ನು ನೀವು ಆಮಿಷಕ್ಕೊಳಗಾಗಿ ಮತದಾನ ಮಾಡಿದರೆ ಅದು ಅಪರಾಧವಾಗಲಿದೆ. ನಿಮಗೆ ಉತ್ತಮ ಅಭ್ಯರ್ಥಿಯನ್ನು ಆಯ್ಕೆ ಮಾಡುವ ವಿವೇಚನೆಯಿದ್ದು, ನಿಮ್ಮ ವಿವೇಚನೆಯಿಂದ ಮತದಾನ ಮಾಡಬೇಕು’ ಎಂದು ತಿಳಿಸಿದರು.
‘ಮತದಾನಕ್ಕೆ ಆಮಿಷ ನೀಡುತ್ತಿರುವ ಬಗ್ಗೆ ನಿಮಗೆ ಮಾಹಿತಿ ಲಭ್ಯವಾದರೆ, ‘ಸಿವಿಜಿಲ್ ’ತಂತ್ರಾಂಶದಲ್ಲಿ ಅದನ್ನು ನಮೂದಿಸಬೇಕು. ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಸೂಕ್ತ ಕ್ರಮ ಕೈಗೊಳ್ಳಲಿದ್ದಾರೆ’ ಎಂದರು.
‘ಬೆಂಗಳೂರಿನಲ್ಲಿ ನಿಮ್ಮ ಮತ ಇಲ್ಲವಾದರೆ, ನಿಮ್ಮ ಊರುಗಳಿಗೆ ತೆರಳಿ ಮತದಾನ ಚಲಾಯಿಸುವ ಮೂಲಕ ಪ್ರಜಾಪ್ರಭುತ್ವಕ್ಕೆ ಗೌರವ ತರುವ ಕೆಲಸ ಮಾಡಬೇಕು’ ಎಂದು ಹೇಳಿದರು.