ಬೆಂಗಳೂರು: ಅಡಿಕೆ, ತೆಂಗು, ದಾಳಿಂಬೆ, ಮುಸುಕಿನ ಜೋಳ... ಸೇರಿ ಹಲವು ಬೆಳೆಗಳಿಗೆ ಕೀಟಗಳು ಹಾಗೂ ರೋಗ ಬಾಧೆ ಕಾಡುತ್ತಿದೆ. ಈ ಬಗ್ಗೆ ಅಳಲು ತೋಡಿಕೊಂಡ ರೈತರು, ಕೃಷಿ ಮೇಳದಲ್ಲಿರುವ ಸಲಹಾ ಕೇಂದ್ರದಲ್ಲಿ ತಜ್ಞರಿಂದ ಪರಿಹಾರ ಕ್ರಮಗಳನ್ನು ತಿಳಿದುಕೊಂಡರು.
ಕೃಷಿ ಸಂಬಂಧಿತ ಪ್ರಶ್ನೆಗಳಿಗೆ ಉತ್ತರಿಸುವ ಉದ್ದೇಶದಿಂದ ಮೇಳದಲ್ಲಿ ಸಲಹಾ ಕೇಂದ್ರ ತೆರೆಯಲಾಗಿದೆ. ಮೊದಲ ದಿನದಿಂದಲೇ ಹೆಚ್ಚಿನ ಸಂಖ್ಯೆಯಲ್ಲಿ ರೈತರು ಕೇಂದ್ರಕ್ಕೆ ಭೇಟಿ ನೀಡುತ್ತಿದ್ದಾರೆ. ಕೃಷಿಯಲ್ಲಿ ತಾವು ಎದುರಿಸುತ್ತಿರುವ ಸಮಸ್ಯೆಗಳು ಹಾಗೂ ಸವಾಲುಗಳನ್ನು ತಜ್ಞರ ಬಳಿ ಹೇಳಿಕೊಳ್ಳುತ್ತಿದ್ದಾರೆ.
ಮಣ್ಣು ವಿಜ್ಞಾನ, ಕೃಷಿ ರಸಾಯನ ವಿಜ್ಞಾನ, ಬೇಸಾಯ ವಿಜ್ಞಾನ, ತೋಟಗಾರಿಕೆ ವಿಭಾಗ, ಕೃಷಿ ಕೀಟ ಹಾಗೂ ಸಸ್ಯ ವಿಜ್ಞಾನ, ಎಂಜಿನಿಯರಿಂಗ್ ವಿಭಾಗ, ಪ್ರಾಣಿ ವಿಜ್ಞಾನ ಸೇರಿ ಹಲವು ವಿಭಾಗಗಳ ತಜ್ಞರು ಸಲಹಾ ಕೇಂದ್ರದಲ್ಲಿದ್ದರು. ರೈತರ ಜೊತೆ ಆಪ್ತ ಸಮಾಲೋಚನೆ ನಡೆಸಿ, ಪರಿಹಾರ ಕ್ರಮಗಳನ್ನು ಸೂಚಿಸುತ್ತಿದ್ದಾರೆ.
‘ಅಡಿಕೆಗೆ ಅಣಬೆ ರೋಗ, ದಾಳಿಂಬೆ ಹಾಗೂ ತರಕಾರಿ ಬೆಳೆಗಳಿಗೆ ಅಂಗಮಾರಿ ರೋಗ ಹೆಚ್ಚಾಗಿ ಕಂಡುಬರುತ್ತಿದೆ. ಬೆಳೆಗಳಲ್ಲಿ ಬಿಳಿ ನೊಣ, ಬಸವನ ಹುಳು, ಸೈನಿಕ ಹುಳು ಸೇರಿ ಕೀಟ ಬಾಧೆಯೂ ಹೆಚ್ಚಾಗಿದೆ. ಇಂಥ ರೋಗಗಳು ಹಾಗೂ ಕೀಟಗಳ ಬಗ್ಗೆ ರೈತರು ಹೆಚ್ಚು ಪ್ರಶ್ನೆಗಳನ್ನು ಕೇಳುತ್ತಿದ್ದಾರೆ. ರೋಗಗಳ ಹತೋಟಿಗೆ ಯಾವೆಲ್ಲ ವೈಜ್ಞಾನಿಕ ಪರಿಹಾರಗಳಿವೆ ಎಂಬುದನ್ನು ರೈತರಿಗೆ ತಿಳಿಸಲಾಗಿದೆ’ ಎಂದು ಕೇಂದ್ರದ ಉಸ್ತುವಾರಿಯೂ ಆಗಿರುವ ಡೀನ್ ಡಾ. ಎನ್.ಬಿ. ಪ್ರಕಾಶ್ ಹೇಳಿದರು.
350 ರೈತರ ಭೇಟಿ: ‘ಕೃಷಿ ಮೇಳಕ್ಕೆ ಶುಕ್ರವಾರ ಬಂದಿದ್ದ 350 ರೈತರು, ಕೃಷಿ ಸಲಹಾ ಕೇಂದ್ರಕ್ಕೆ ಭೇಟಿ ನೀಡಿ ನೋಂದಣಿ ಮಾಡಿಸಿದ್ದಾರೆ. ತಮ್ಮ ಸಮಸ್ಯೆಗಳಿಗೆ ಪರಿಹಾರ ಪಡೆದುಕೊಂಡಿದ್ದಾರೆ’ ಎಂದು ಪ್ರಕಾಶ್ ತಿಳಿಸಿದರು.