ವಾಲ್ಮೀಕಿ ಅಭಿವೃದ್ಧಿ ನಿಗಮದ ಬ್ಯಾಂಕ್ ಖಾತೆಯಿಂದ ಹಣವನ್ನು ಅಕ್ರಮವಾಗಿ ವರ್ಗಾವಣೆ ಮಾಡಿರುವ ಹಗರಣ ಬಹಿರಂಗವಾದ ಬಳಿಕ ಹಣಕಾಸು ಇಲಾಖೆಯು ಪರಿಶೀಲನೆ ಆರಂಭಿಸಿದೆ. ಸಮಾಜ ಕಲ್ಯಾಣ, ಪರಿಶಿಷ್ಟ ಪಂಗಡಗಳ ಕಲ್ಯಾಣ, ಹಿಂದುಳಿದ ವರ್ಗಗಳ ಕಲ್ಯಾಣ ಮತ್ತು ಕಂದಾಯ ಇಲಾಖೆಯ ಅಧೀನದಲ್ಲಿರುವ ಜಾತಿವಾರು ನಿಗಮ, ಮಂಡಳಿಗಳು ಬ್ಯಾಂಕ್ಗಳಲ್ಲಿ ಖಾತೆ ತೆರೆದು ₹1,731.16 ಕೋಟಿ ಇರಿಸಿರುವುದು ಪತ್ತೆಯಾಗಿದೆ. ಈ ಎಲ್ಲ ನಿಗಮ, ಮಂಡಳಿಗಳು ಖಾತೆಗಳಲ್ಲಿ ಇರಿಸಿರುವ ಮೊತ್ತವನ್ನು ಹುಜೂರ್ ಖಜಾನೆಗೆ ವರ್ಗಾಯಿಸುವಂತೆ ಹಣಕಾಸು ಇಲಾಖೆ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಎಲ್.ಕೆ. ಅತೀಕ್ ಅವರು ಸಂಬಂಧಿಸಿದ ಬ್ಯಾಂಕ್ಗಳ ಮುಖ್ಯಸ್ಥರಿಗೆ ಪತ್ರ ಬರೆದಿದ್ದಾರೆ.