ಬೆಂಗಳೂರು: ಅಗ್ನಿ ಸುರಕ್ಷತಾ ಕ್ರಮ ಕೈಗೊಳ್ಳದ ಆರೋಪದಡಿ ಶಾಂತಲಾನಗರದಲ್ಲಿರುವ ಬಹುಮಹಡಿ ಕಟ್ಟಡವೊಂದರ ಮಾಲೀಕರ ವಿರುದ್ಧ ಅಶೋಕನಗರ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ.
‘ಅಗ್ನಿಶಾಮಕ ಅಧಿಕಾರಿ ಜಿ. ಕೃಷ್ಣಸ್ವಾಮಿ ಎಂಬುವರು ದೂರು ನೀಡಿದ್ದಾರೆ. ಕಟ್ಟಡದ ಮಾಲೀಕರಾದ ಎಂ.ನೂರುಲ್ಲಾ ಷರೀಫ್, ಅಜ್ಮುಲ್ಲಾ ಷರೀಫ್ ಹಾಗೂ ಅಬ್ದುಲ್ ಅಲೀಮ್ ಎಂಬುವರ ವಿರುದ್ಧ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಅವರಿಗೆ ನೋಟಿಸ್ ನೀಡಿ ವಿಚಾರಣೆ ನಡೆಸಬೇಕಿದೆ’ ಎಂದು ಪೊಲೀಸರು ಹೇಳಿದರು.
‘ಕಟ್ಟಡದಲ್ಲಿ ಯಾವುದೇ ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡಿಲ್ಲ. ಅಗ್ನಿಶಾಮಕ ಇಲಾಖೆಯಿಂದಲೂ ಅನುಮತಿ ಪಡೆದಿಲ್ಲ. ಮುಂದಿನ ದಿನಗಳಲ್ಲಿ ಏನಾದರೂ ಅವಘಡಗಳು ಸಂಭವಿಸಿದರೆ ಸಾರ್ವಜನಿಕರ ಪ್ರಾಣಕ್ಕೆ ಹಾಗೂ ಆಸ್ತಿಗೆ ಹಾನಿಯಾಗುವ ಸಾಧ್ಯತೆ ಇರುವುದಾಗಿ ಕೃಷ್ಣಸ್ವಾಮಿ ಅವರು ದೂರಿನಲ್ಲಿ ಉಲ್ಲೇಖಿಸಿದ್ದಾರೆ’ ಎಂದು ಮಾಹಿತಿ ನೀಡಿದರು.