ಬೆಂಗಳೂರು: ನಗರದಲ್ಲಿ ಕೊರೊನಾ ಸೋಂಕು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಜುಲೈ 1ರಿಂದ ಸಿಂಗೇನ ಅಗ್ರಹಾರದ ಸಗಟು ಹಣ್ಣು ಮಾರುಕಟ್ಟೆಯನ್ನು ಸ್ವಯಂಪ್ರೇರಿತವಾಗಿ ಬಂದ್ ಮಾಡಲು ಒಂದು ಬಣದ ವರ್ತಕರು ನಿರ್ಧರಿಸಿದ್ದಾರೆ.
'ಇತ್ತೀಚೆಗೆ ಮಾರುಕಟ್ಟೆಯಲ್ಲಿ ಕೊರೊನಾ ಸೋಂಕಿನಿಂದ ಇಬ್ಬರು ಮೃತಪಟ್ಟಿದ್ದರು. ಮಾರುಕಟ್ಟೆಯಲ್ಲಿ ಸೋಂಕು ಹರಡುತ್ತಿರುವ ಕುರಿತು ಎಪಿಎಂಸಿ ನಿರ್ದೇಶಕರಿಗೆ ದೂರು ನೀಡಿದರೂ ಯಾವುದೇ ಕ್ರಮ ಕೈಗೊಂಡಿಲ್ಲ. ಮಾರುಕಟ್ಟೆ ಪ್ರಾಂಗಣದಲ್ಲಿ ಕೆಲಸ ಮಾಡುವ ಎಲ್ಲರ ಆರೋಗ್ಯ ರಕ್ಷಣೆ ದೃಷ್ಟಿಯಿಂದ ತಾತ್ಕಾಲಿಕವಾಗಿ ವ್ಯಾಪಾರ ಸ್ಥಗಿತಗೊಳಿಸಲು ನಿರ್ಧರಿಸಿದ್ದೇವೆ' ಎಂದು ದಿ ಬೆಂಗಳೂರು ಫ್ರೂಟ್ಸ್ ಕಮಿಷನ್ ಏಜೆಂಟ್ಸ್ ಅಸೋಸಿಯೇಷನ್ ಗೌರವ ಕಾರ್ಯದರ್ಶಿ ವಿ.ಸಿದ್ದಾರೆಡ್ಡಿ ತಿಳಿಸಿದರು.
'ಮಾರುಕಟ್ಟೆಯಲ್ಲಿ ಎರಡು ಸಂಘಗಳಿದ್ದು, ಬಂದ್ ಮಾಡುವಂತೆ ಒಂದು ಸಂಘ ಮನವಿ ನೀಡಿದರೆ, ಮತ್ತೊಂದು ಸಂಘ ವಿರೋಧ ವ್ಯಕ್ತಪಡಿಸುತ್ತಿದೆ. ಬಂದ್ ಮಾಡುವ ಕುರಿತು ಎಪಿಎಂಸಿ ನಿರ್ದೇಶಕರ ಜೊತೆ ಚರ್ಚಿಸಲಾಗುವುದು' ಎಂದು ಎಪಿಎಂಸಿಯ ಹಣ್ಣು-ತರಕಾರಿ ವಿಭಾಗದ ಅಧಿಕಾರಿಯೊಬ್ಬರು ತಿಳಿಸಿದರು.