ಬೆಂಗಳೂರು: ‘ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಸ್ವತಂತ್ರವಾಗಿ ಕೆಲಸ ಮಾಡಲು ಗಾಂಧಿ ಕುಟುಂಬ ಅವಕಾಶ ನೀಡುತ್ತಿಲ್ಲ. ಅನುಭವಿ ನಾಯಕನಿಗೆ ಅನನುಭವಿ ರಾಹುಲ್ ಗಾಂಧಿ ಸಲಹೆ ನೀಡುತ್ತಿದ್ದಾರೆ’ ಎಂದು ರಾಜ್ಯಸಭೆಯ ಬಿಜೆಪಿ ಸದಸ್ಯ ಲಹರ್ ಸಿಂಗ್ ಸಿರೋಯ ಹೇಳಿದರು.
ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಹಿರಿಯರಾದ ಖರ್ಗೆ ಅವರು ಕೆ.ಸಿ. ವೇಣುಗೋಪಾಲ್, ಜೈರಾಂ ರಮೇಶ್, ರಣದೀಪ್ ಸಿಂಗ್ ಸುರ್ಜೇವಾಲಾ ಅವರಂತಹ ಕಿರಿಯರ ಆಣತಿಯಂತೆ ಕೆಲಸ ಮಾಡುತ್ತಿದ್ದಾರೆ. ಇದನ್ನು ನಾವು ನಿರೀಕ್ಷೆ ಮಾಡಿರಲಿಲ್ಲ’ ಎಂದರು.
ಎಸ್. ನಿಜಲಿಂಗಪ್ಪ ಅವರು ಗಾಂಧಿ ಕುಟುಂಬದ ಒತ್ತಡಕ್ಕೆ ಮಣಿಯದೆ ಕೆಲಸ ಮಾಡಿದ್ದರು. ಎಚ್.ಡಿ. ದೇವೇಗೌಡರು ಪ್ರಧಾನಿಯಾಗಿದ್ದ ಅವಧಿಯಲ್ಲಿ ಗಾಂಧಿ ಕುಟುಂಬವು ಅವರನ್ನು ಹತ್ತಿಕ್ಕಲು ಪ್ರಯತ್ನಿಸಿತ್ತು. ಆಗ ಅವರು ಒತ್ತಡಕ್ಕೆ ಮಣಿದಿರಲಿಲ್ಲ. ಗಾಂಧಿ ಕುಟುಂಬವು ಕರ್ನಾಟಕದ ನಾಯಕರನ್ನು ಹತ್ತಿಕ್ಕಲು ಸದಾ ಪ್ರಯತ್ನಿಸುತ್ತಿರುತ್ತದೆ ಎಂದು ದೂರಿದರು.
ನೂತನ ಸಂಸತ್ ಕಟ್ಟಡ ಉದ್ಘಾಟನೆ ಸಮಾರಂಭವನ್ನು ಬಹಿಷ್ಕರಿಸುವ ಆದೇಶ ನೀಡಬೇಕೆಂಬ ರಾಹುಲ್ ಗಾಂಧಿಯವರ ಸೂಚನೆಯನ್ನು ಖರ್ಗೆಯವರು ಒಪ್ಪಿಕೊಳ್ಳಬಾರದಿತ್ತು. ಪಕ್ಷ ಅಥವಾ ಒಂದು ಕುಟುಂಬಕ್ಕಿಂತ ದೇಶ ಮುಖ್ಯ ಎಂದು ಅವರು ಯೋಚಿಸಬೇಕಿತ್ತು ಎಂದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.