ಬೆಂಗಳೂರು: ಸಂಗೀತ ಪ್ರೇಮಿಗಳಿಗೆ ಒಂದು ತಿಂಗಳು ರಸದೌತಣ ನೀಡಲು ಶ್ರೀರಾಮಸೇವಾ ಮಂಡಳಿಯ ರಾಮನವಮಿ ಸೆಲಬ್ರೇಷನ್ಸ್ ಟ್ರಸ್ಟ್ ಸಜ್ಜಾಗಿದೆ.
1939ರಲ್ಲಿ ಎಸ್.ವಿ.ನಾರಾಯಣಸ್ವಾಮಿ ಅವರು ಸ್ಥಾಪಿಸಿದ ಸಂಸ್ಥೆ 85 ವರ್ಷಗಳಿಂದ ಸಂಗೀತ ಕ್ಷೇತ್ರಕ್ಕೆ ತನ್ನದೇ ಆದ ಕೊಡುಗೆ ನೀಡುತ್ತಾ ಬಂದಿದೆ. 85ನೇ ವರ್ಷ ಆಗಿರುವುದರಿಂದ ‘ಚಂದ್ರಶಿಲಾ ಮಹೋತ್ಸವ’ ಎಂದು ಆಚರಣೆ ಮಾಡಲಾಗುತ್ತಿದೆ ಎಂದು ಮಂಡಳಿಯ ಮ್ಯಾನೇಜಿಂಗ್ ಟ್ರಸ್ಟಿ ಎಸ್.ಎನ್. ವರದರಾಜ್ ‘ಪ್ರಜಾವಾಣಿ’ಗೆ ತಿಳಿಸಿದರು.
ಚಾಮರಾಜಪೇಟೆಯ ಹಳೆಕೋಟೆ ಪ್ರೌಢಶಾಲೆ ಆವರಣದಲ್ಲಿ ಮಾರ್ಚ್ 30ರಿಂದ ಆರಂಭವಾಗಲಿದ್ದು, ಏಪ್ರಿಲ್ 30ರವರೆಗೆ ಸಂಗೀತ ಸುಧೆ ಹರಿಯಲಿದೆ. ಖ್ಯಾತ ಸಂಗೀತಗಾರರು ಕಾರ್ಯಕ್ರಮಗಳನ್ನು ಪ್ರಸ್ತುತಪಡಿಸಲಿದ್ದಾರೆ. ಹಿಂದೂಸ್ತಾನಿ, ಕರ್ನಾಟಕ ಶಾಸ್ತ್ರೀಯ ಸಂಗೀತ ಗಾಯಕರು, ವೀಣೆ, ಪಿಟೀಲು, ಕೊಳಲು ಸೇರಿ ವಿವಿಧ ವಾದ್ಯಗಳ ವಾದಕರು ಸಂಗೀತ ಕಛೇರಿ ನಡೆಸಿಕೊಡಲಿದ್ದಾರೆ ಎಂದು ವಿವರಿಸಿದರು.
ಮಾರ್ಚ್ 30ರಂದು ಸಂಜೆ 5.30ಕ್ಕೆ ಉದ್ಘಾಟನೆ ಕಾರ್ಯಕ್ರಮ ನಡೆಯಲಿದ್ದು, ಸಂಜೆ 6.45ರಿಂದ ಬಾಂಬೆ ಜಯಶ್ರೀ ಮತ್ತು ಸಂಗಡಿಗರಿಂದ ಸಂಗೀತ ಕಛೇರಿ ನಡೆಯಲಿವೆ.
ಒಂದು ತಿಂಗಳ ಸಂಗೀತೋತ್ಸವದಲ್ಲಿ ಪ್ರವೀಣ್ ಗೋಡ್ಖಿಂಡಿ, ಸ್ಫೂರ್ತಿ ರಾವ್, ಹರೀಶ್ ಶಿವರಾಮಕೃಷ್ಣನ್, ರಂಜನಿ ಮತ್ತು ಗಾಯತ್ರಿ, ದುಶ್ಯಂತ್ ಶ್ರೀಧರ್, ಮಲ್ಲಾಡಿ ಸಹೋದರರು, ಸಿಕ್ಕಿಲ್ ಗುರುಚರಣ್, ತ್ರಿಚೂರು ಸಹೋದರರು, ಪ್ರಿಯಾ ಸಹೋದರಿಯರು, ಬೆಂಗಳೂರು ಎಸ್. ಶಂಕರ್, ವಾರಿಜಾಶ್ರೀ, ಜಯತೀರ್ಥ ಮೇವುಂಡಿ, ಮೈಸೂರು ನಾಗರಾಜ್ ಮತ್ತು ಮೈಸೂರು ಮಂಜುನಾಥ್, ರಯಾಸ್ ಮತ್ತು ಹಫೀಜ್ ಬಾಲೇಖಾನ್, ವಿದ್ಯಾಭೂಷಣ, ವೆಂಕಟೇಶ್ ಕುಮಾರ್, ಶಿವಮಣಿ, ಯು. ರಾಜೇಶ್ ಮತ್ತು ಹರ್ಮೀತ್, ಎಂ.ಎಸ್. ಶೀಲಾ, ಸುಧಾ ರಘುನಾಥನ್ ಸೇರಿ ಸಂಗೀತ ಕ್ಷೇತ್ರದ ಪ್ರಮುಖ ಗಾಯಕರು ಹಾಗೂ ಕಲಾವಿದರು ಕಛೇರಿ ನಡೆಸಿಕೊಡಲಿದ್ದಾರೆ ಎಂದು ಮಾಹಿತಿ ನೀಡಿದರು.
www.ramanavamitickets.com ವೆಬ್ಸೈಟ್ ಮೂಲಕ ಟಿಕೆಟ್ಗಳನ್ನು ಕಾಯ್ದಿರಿಸಬಹುದು. ಮಾಹಿತಿಗೆ ಮಂಡಳಿಯ ಪ್ರಧಾನ ಕಾರ್ಯದರ್ಶಿ ಮತ್ತು ಮ್ಯಾನೇಜಿಂಗ್ ಟ್ರಸ್ಟಿ ಎಸ್.ಎನ್. ವರದರಾಜ್ (9448079079) ಅಥವಾ ಕಾರ್ಯನಿರ್ವಾಹಕ ಅಧಿಕಾರಿ ಎಸ್. ಅಭಿಜಿತ್ ವರದರಾಜ್ (9483518012) ಅವರನ್ನು ಸಂಪರ್ಕಿಸಬಹುದು ಎಂದು ತಿಳಿಸಿದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.