ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಂಗಳೂರಿನಲ್ಲಿ ಗುಡುಗಿನ ಅಬ್ಬರ, ಧಾರಾಕಾರ ಮಳೆ

ತಡರಾತ್ರಿವರೆಗೂ ವರ್ಷಧಾರೆ l ರಸ್ತೆಗಳು ಜಲಾವೃತ, ಚಾಲಕರ ಪರದಾಟ
Last Updated 4 ಸೆಪ್ಟೆಂಬರ್ 2022, 21:52 IST
ಅಕ್ಷರ ಗಾತ್ರ

ಬೆಂಗಳೂರು: ನಗರದಲ್ಲಿ ಕೆಲ ದಿನಗಳಿಂದ ಬಿಡುವು ನೀಡುತ್ತಲೇ ಧಾರಾಕಾರವಾಗಿ ಮಳೆ ಸುರಿಯುತ್ತಿದ್ದು, ಗುಡುಗು–ಸಿಡಿಲಿನ ಅಬ್ಬರವೂ ಜೋರಾಗಿದೆ.

ಶನಿವಾರ ಬೆಳಿಗ್ಗೆಯಿಂದ ಸಂಜೆಯವರೆಗೂ ಬಿಡುವು ನೀಡಿದ್ದ ಮಳೆ, ರಾತ್ರಿ ಜೋರಾಗಿ ಸುರಿಯಿತು. ಭಾನುವಾರವೂ ಬೆಳಿಗ್ಗೆಯಿಂದ ಸಂಜೆಯವರೆಗೂ ಮಳೆ ಇರಲಿಲ್ಲ. ರಾತ್ರಿ 8 ಗಂಟೆಯಿಂದ ಆರಂಭವಾದ ಮಳೆ, ತಡರಾತ್ರಿಯವರೆಗೂ ಸುರಿಯಿತು.

ಕಾಲುವೆಗಳು ತುಂಬಿ ಪ್ರಮುಖ ರಸ್ತೆಗಳ ಮೇಲೆಯೇ ನೀರು ಹೊಳೆಯಂತೆ ಹರಿಯಿತು. ತಗ್ಗು ಪ್ರದೇಶ
ಗಳಲ್ಲಿ ನೀರು ನಿಂತುಕೊಂಡ ದೃಶ್ಯಗಳು ಕಂಡುಬಂದವು.

ವಿಜಯನಗರ, ರಾಜಾಜಿನಗರ, ಬಸವೇಶ್ವರನಗರ, ಮಹಾಲಕ್ಷ್ಮಿ ಲೇಔಟ್, ಯಶವಂತಪುರ, ಪೀಣ್ಯ,
ಲಗ್ಗೆರೆ, ನಂದಿನಿ ಲೇಔಟ್, ಮಲ್ಲೇಶ್ವರ, ಶೇಷಾದ್ರಿಪುರ, ಹೆಬ್ಬಾಳ, ಸಂಜಯನಗರ, ಆರ್‌.ಟಿ.ನಗರ, ನಾಗವಾರ, ಹೆಣ್ಣೂರು, ಬಾಣಸವಾಡಿ, ರಾಜರಾಜೇಶ್ವರಿನಗರ, ಕೆಂಗೇರಿ, ದೀಪಾಂಜಲಿನಗರ, ಚಾಮರಾಜಪೇಟೆ ಹಾಗೂ ಸುತ್ತಮುತ್ತ ಪ್ರದೇಶಗಳಲ್ಲಿ ಮಳೆ ಅಬ್ಬರವಿತ್ತು.

ಶಾಂತಿನಗರ, ವಿಲ್ಸನ್ ಗಾರ್ಡನ್, ಸಂಪಂಗಿರಾಮನಗರ, ಗಾಂಧಿನಗರ, ಮೆಜೆಸ್ಟಿಕ್, ಶಿವಾಜಿನಗರ, ಎಂ.ಜಿ.ರಸ್ತೆ, ಕೋರಮಂಗಲ, ಮಡಿವಾಳ, ಲಾಲ್‌ಬಾಗ್, ಅಶೋಕನಗರ ಹಾಗೂ ಸುತ್ತಮುತ್ತ ಸ್ಥಳಗಳಲ್ಲೂ ಮಳೆ ಆಯಿತು.

ಮೆಜೆಸ್ಟಿಕ್ ರೈಲ್ವೆ ಕೆಳ ಸೇತುವೆ, ಓಕಳಿಪುರ ಕೆಳಸೇತುವೆ, ಕಸ್ತೂರಿ
ನಗರದ ಕೆಳ ಸೇತುವೆ, ಇತೆರೆಡೆ ಮೂರು ಅಡಿಗಿಂತ ಹೆಚ್ಚು ನೀರು ಹರಿಯಿತು. ಅದರಲ್ಲೇ ವಾಹನಗಳು ಸಂಚರಿಸಿದವು. ಕೆಲವು ಕೆಟ್ಟು ನಿಂತವು. ಅಂಥ ವಾಹನಗಳನ್ನು ಸ್ಥಳೀಯರೇ ತಳ್ಳಿ ದಡ ಮುಟ್ಟಿಸಿದರು.

ಮಾರುಕಟ್ಟೆ ಪ್ರದೇಶದಲ್ಲಿ ನೀರು...: ಮಾರುಕಟ್ಟೆ ಪ್ರದೇಶಗಳಾದ ಅವೆನ್ಯೂ ರಸ್ತೆ, ಚಿಕ್ಕಪೇಟೆ, ಬಿವಿಕೆ ಅಯ್ಯಂಗಾರ್ ರಸ್ತೆ, ಕೆಂಪೇಗೌಡ ರಸ್ತೆ, ಶಿವಾಜಿನಗರ ಹಾಗೂ ಇತರೆಡೆ ರಸ್ತೆಗಳಲ್ಲಿಯೇ ನೀರು ಧಾರಾಕಾರವಾಗಿ ಹರಿಯಿತು.

ಬಹುತೇಕ ಮಾರುಕಟ್ಟೆ ಪ್ರದೇಶಗಳಲ್ಲಿ ಹಲವು ದಿನಗಳಿಂದ ಕಾಮಗಾರಿ ನಡೆಯುತ್ತಿದೆ. ಇದಕ್ಕಾಗಿ ರಸ್ತೆಯಲ್ಲೂ ಅಗೆಯಲಾಗಿದ್ದು, ಕಾಲುವೆಗಳೂ ಮುಚ್ಚಿವೆ. ಕಾಲುವೆಯಲ್ಲಿ ಹರಿಯಬೇಕಿರುವ ನೀರು ರಸ್ತೆಯಲ್ಲಿ ಹರಿದು, ವಾಹನ ಹಾಗೂ ಪಾದಚಾರಿಗಳ ಓಡಾಟಕ್ಕೆ ತೊಂದರೆ ಉಂಟಾಯಿತು.

ಭಾನುವಾರ ರಜೆ ದಿನವಾಗಿದ್ದರಿಂದ ಹಲವರು ಮಾರುಕಟ್ಟೆ ಪ್ರದೇಶಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಬಂದಿದ್ದರು. ಧಾರಾಕಾರ ಮಳೆಯ ಕಾರಣ ಹೆಚ್ಚಿನವರು ಅಂಗಡಿಗಳಲ್ಲಿ ಆಶ್ರಯ ಪಡೆದಿದ್ದುದು ಕಂಡುಬಂತು.

‘ಮೂರು ಕಡೆ ಉರುಳಿದ ಮರಗಳು’

‘ಭಾನುವಾರ ಸಂಜೆಯೂ ನಗರದಲ್ಲಿ ಉತ್ತಮ ಮಳೆ ಆಯಿತು. ಮೂರು ಕಡೆ ರಸ್ತೆಗೆ ಮರಗಳು ಉರುಳಿದ್ದು, ಸಂಚಾರಕ್ಕೆ ತೊಂದರೆ ಆಗಿರುವ ಬಗ್ಗೆ ದೂರು ಬಂದಿವೆ’ ಎಂದು ಬಿಬಿಎಂಪಿ ಸಹಾಯವಾಣಿ ಸಿಬ್ಬಂದಿ ಹೇಳಿದರು.

‘ಆರ್‌.ಟಿ.ನಗರದ ಪಿಎನ್‌ಟಿ ಕಾಲೊನಿ, ಡಿ.ಜೆ.ಹಳ್ಳಿಯ ಆನಂದ ಸಿನಿಮಂದಿರ ಹಾಗೂ ಕೋರಮಂಗಲದ 8ನೇ ಹಂತದಲ್ಲಿ ಮರಗಳು ಉರುಳಿವೆ. ಸಿಬ್ಬಂದಿ ಸ್ಥಳಕ್ಕೆ ಹೋಗಿ ತೆರವು ಕಾರ್ಯ ನಡೆಸುತ್ತಿದ್ದಾರೆ’
ಎಂದೂ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT