ಹೆಸರಘಟ್ಟ: ಮಾರುಕಟ್ಟೆ ಸ್ಥಳಾಂತರಕ್ಕೆ ವಿರೋಧ ವ್ಯಕ್ತಪಡಿಸಿರುವ ಗ್ರಾಮಸ್ಥರು, ಸ್ಥಳಕ್ಕೆ ಬಂದಿದ್ದ ಅಧಿಕಾರಿಗಳನ್ನು ಭಾನುವಾರ ತರಾಟೆಗೆ ತೆಗೆದುಕೊಂಡರು.
‘ಮಾರುಕಟ್ಟೆ ಸ್ಥಳಾಂತರ ಮಾಡುವುದಕ್ಕೆ ನಮ್ಮ ವಿರೋಧವಿಲ್ಲ. ಕೊರೊನಾ ಸೋಂಕು ನಿಯಂತ್ರಣಕ್ಕೆ ಬಾರದಹೊರತು ಮಳಿಗೆ ತೆರೆಯಬಾರದು. ಮಾರುಕಟ್ಟೆಯ ಅಸುಪಾಸು ಸುಮಾರು ಹತ್ತು ಗ್ರಾಮಗಳು ಇವೆ. ಸಾವಿರಾರು ಕೃಷಿಕರು ವಾಸವಾಗಿದ್ದಾರೆ. ಇಲ್ಲಿ ಮಳಿಗೆಗಳನ್ನು ತೆರೆದರೆ ಸಾವಿರಾರು ಜನರಿಗೆ ಸೋಂಕು ಹರಡುವ ಸಾಧ್ಯತೆ ಇದೆ’ ಎಂದು ಹುಸ್ಕೂರು ಗ್ರಾಮ ಪಂಚಾಯಿತಿ ಅಧ್ಯಕ್ಷ ಸೋಮಶೇಖರ್ ಅಧಿಕಾರಿಗಳಿಗೆ ಮನವಿ ಮಾಡಿದರು.
‘ಹೊನ್ನಸಂದ್ರ, ಮತ್ತಹಳ್ಳಿ, ವಡೇರಹಳ್ಳಿ, ದಾಸನಪುರ, ಗೋವಿಂದಪುರ ಗ್ರಾಮಗಳಲ್ಲಿ ಮಕ್ಕಳ ಸಂಖ್ಯೆ ಅಧಿಕವಾಗಿದೆ. ಕೊರೊನಾ ಸೋಂಕು ಹರಡಿದರೆ ದೊಡ್ಡ ಅನಾಹುತ ಸಂಭವಿಸುತ್ತದೆ’ಹೆಸರಘಟ್ಟ ಜಿಲ್ಲಾ ಪಂಚಾಯಿತಿ ಸದಸ್ಯ ಎಂ.ಬಿ.ಕೃಷ್ಣಯ್ಯ ಆಕ್ರೋಶ ವ್ಯಕ್ತಪಡಿಸಿದರು.
‘ಸೋಂಕು ನಿಯಂತ್ರಣಕ್ಕೆ ಬರುವ ಮುನ್ನ ಸ್ಥಳಾಂತರ ಮಾಡಿದರೆ ಏಳು ಗ್ರಾಮಗಳ ಗ್ರಾಮಸ್ಥರು ಸೇರಿ ಪ್ರತಿಭಟನೆ ಮಾಡುತ್ತೇವೆ. ಮಳಿಗೆ ತೆರೆಯಲು ಬಿಡುವುದಿಲ್ಲ’ ಎಂದು ಸ್ಥಳಕ್ಕೆ ಬಂದಿದ್ದ ಅಧಿಕಾರಿಗಳಿಗೆ ಹುಸ್ಕೂರು ಪಂಚಾಯಿತಿ ಸದಸ್ಯ ಅಂಜನಪ್ಪ ಖಡಕ್ ಎಚ್ಚರಿಕೆ ನೀಡಿದರು.