ಬೆಂಗಳೂರು: ‘ಬೆಳ್ಳಂದೂರು ಹಾಗೂ ವರ್ತೂರು ಕೆರೆಗಳ ಸದ್ಯದ ಮಾಲಿನ್ಯ ಪ್ರಮಾಣದ ಕುರಿತು ವರದಿ ಸಲ್ಲಿಸಿ’ ಎಂದು ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಗೆ (ಕೆಎಸ್ಪಿಸಿಬಿ) ಹೈಕೋರ್ಟ್ ನಿರ್ದೇಶಿಸಿದೆ.
ಈ ಕುರಿತು ವಕೀಲೆ ಗೀತಾ ಮಿಶ್ರಾ ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಮುಖ್ಯ ನ್ಯಾಯಮೂರ್ತಿ ಅಭಯ್ ಎಸ್. ಓಕಾ ನೇತೃತ್ವದ ವಿಭಾಗೀಯ ನ್ಯಾಯಪೀಠ ವಿಚಾರಣೆ ನಡೆಸಿತು.
ವಿಚಾರಣೆ ವೇಳೆ ಕೆಎಸ್ಸಿಬಿ ಪರ ವಕೀಲರು ಲಿಖಿತ ಹೇಳಿಕೆ ಸಲ್ಲಿಸಿದರು.ಬೆಳ್ಳಂದೂರು, ವರ್ತೂರು ಕೆರೆಗಳ ಮತ್ತು ವೃಷಭಾವತಿ ನದಿ ಜಲಾಯನ ಪ್ರದೇಶದ ಸಂರಕ್ಷಣೆಗೆ ಕೈಗೊಂಡ ಕ್ರಮಗಳ ಬಗ್ಗೆ ವಿವರಣೆ ನೀಡಿದರು.
ಇದಕ್ಕೆ ಪ್ರತಿಕ್ರಿಯಿಸಿದ ನ್ಯಾಯಪೀಠ, 'ಮಾಲಿನ್ಯ ಪ್ರಮಾಣ ಕಾಯ್ದುಕೊಂಡು ಹೋಗಲು ಯಾವ ಕ್ರಮ ಕೈಗೊಳ್ಳಲಾಗುತ್ತದೆ ಎಂಬುದನ್ನು ತಿಳಿಸಿ' ಎಂದು ಕೆಎಸ್ಪಿಸಿಬಿಗೆ ಸೂಚಿಸಿದೆ.
ಇದೇ ವೇಳೆ ಅರ್ಜಿದಾರರ ಪರ ವಕೀಲ ಜಿ.ಆರ್.ಮೋಹನ್, ‘ಬೆಳ್ಳಂದೂರು ಹಾಗೂ ವರ್ತೂರು ಕೆರೆಗಳ ಬಫರ್ ವಲಯದಲ್ಲಿ ಬಿಡಿಎ ರಸ್ತೆ ನಿರ್ಮಿಸುತ್ತಿದೆ’ ಆರೋಪಿಸಿ ಇದನ್ನು ಪುಷ್ಟೀಕರಿಸುವ ಫೋಟೊಗಳನ್ನು ನ್ಯಾಯಪೀಠಕ್ಕೆಸಲ್ಲಿಸಿದರು.ಇದಕ್ಕೆ ನ್ಯಾಯಪೀಠ, ದಾಖಲೆ ಒದಗಿಸುವಂತೆ ಬಿಡಿಎಗೆ ಸೂಚಿಸಿ ವಿಚಾರಣೆ ಮುಂದೂಡಿದೆ.