ಬೆಂಗಳೂರು:‘ಬೆಂಗಳೂರಿನ ಯಾವ ಪ್ರದೇಶಗಳಲ್ಲಿ ಎಷ್ಟು ಗಿಡ ನೆಡಲಾಗಿದೆ ಮತ್ತು ಎಷ್ಟು ಮರಗಳನ್ನು ಸ್ಥಳಾಂತರಿಸಲಾಗಿದೆ ಎಂಬ ಬಗ್ಗೆ ವರದಿ ಸಲ್ಲಿಸಿ’ ಎಂದು ಬೆಂಗಳೂರು ಮೆಟ್ರೊ ರೈಲು ಅಭಿವೃದ್ಧಿ ನಿಗಮಕ್ಕೆ (ಬಿಎಂಆರ್ಸಿಎಲ್) ಹೈಕೋರ್ಟ್ ನಿರ್ದೇಶಿಸಿದೆ.
ಮರ ಕಡಿಯುವುದನ್ನು ಆಕ್ಷೇಪಿಸಿ ಪರಿಸರವಾದಿ ಟಿ.ದತ್ತಾತ್ರೇಯ ದೇವರೆ ಹಾಗೂ‘ಬೆಂಗಳೂರು ಎನ್ವಿರಾನ್ಮೆಂಟ್ ಟ್ರಸ್ಟ್’ ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಮುಖ್ಯ ನ್ಯಾಯಮೂರ್ತಿ ಪಿ.ಬಿ.ವರಾಳೆ ನೇತೃತ್ವದ ವಿಭಾಗೀಯ ನ್ಯಾಯಪೀಠ ಮಂಗಳವಾರ ವಿಚಾರಣೆ ನಡೆಸಿತು.
‘ಗಿಡ ನೆಟ್ಟಿರುವುದನ್ನು ಯಾವ ಪ್ರಾಧಿಕಾರ ಪರಿಶೀಲಿಸಿದೆ. ಅದಕ್ಕೆ ನೀಡಿರುವ ಒಪ್ಪಿಗೆ, ನಿರ್ದಿಷ್ಟ ಪ್ರದೇಶದಲ್ಲಿ ನೆಡಲಾಗಿರುವ ಗಿಡಗಳ ಸಂಖ್ಯೆಯನ್ನು ಒಳಗೊಂಡ ವರದಿಯನ್ನು ಸಲ್ಲಿಸಿ’ ಎಂದು ನ್ಯಾಯಪೀಠ ಹೇಳಿದೆ.
‘ಮೆಟ್ರೊ ಕಾಮಗಾರಿಗೆ ಮಧ್ಯಂತರ ತಡೆ ನೀಡಲಾಗಿಲ್ಲ. ಹೀಗಾಗಿ, ಗಿಡ ನೆಟ್ಟಿರುವುದು, ಸ್ಥಳಾಂತರಕ್ಕೆ ಸಂಬಂಧಿಸಿದಂತೆ ಸಮಗ್ರ ವರದಿಯನ್ನು ಇದೇ 18ರೊಳಗೆ ಸಲ್ಲಿಸಬೇಕು’ ಎಂದು ಬಿಎಂಆರ್ಸಿಎಲ್ಗೆ ಸೂಚಿಸಿದ ನ್ಯಾಯಪೀಠ, ವಿಚಾರಣೆಯನ್ನು ಇದೇ 22ಕ್ಕೆ ಮುಂದೂಡಿದೆ.