ಬೆಂಗಳೂರು: ‘ಕೊರೊನಾ ಸೋಂಕು ಸದ್ಯಕ್ಕೆ ಮುಗಿಯುವ ಲಕ್ಷಣ ಕಾಣುತ್ತಿಲ್ಲ. ಎಲ್ಲೆಡೆ ಸಿಬ್ಬಂದಿ ಕಚೇರಿಗೆ ಬರಲು ಹೆದರುವ ಸ್ಥಿತಿ ಉಂಟಾಗುತ್ತಿದೆ. ಅದರಲ್ಲೂ ಬೆಂಗಳೂರಿನ ಪರಿಸ್ಥಿತಿ ಹಿಂದಿಗಿಂತ ಕೆಟ್ಟದಾಗಿದೆ’ ಎಂದು ಹೈಕೋರ್ಟ್ ಆತಂಕ ವ್ಯಕ್ತಪಡಿಸಿದೆ.
ಕೊರೊನಾ ಸಂಕಷ್ಟಕ್ಕೆ ಸಂಬಂಧಿಸಿದ ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳನ್ನು ಮುಖ್ಯ ನ್ಯಾಯಮೂರ್ತಿ ನೇತೃತ್ವದ ವಿಭಾಗೀಯ ನ್ಯಾಯಪೀಠ ಗುರುವಾರ ವಿಚಾರಣೆ ನಡೆಸಿತು.
ವಿಚಾರಣೆ ವೇಳೆ ಅರ್ಜಿದಾರರ ಪರ ವಕೀಲ ಕ್ಲಿಫ್ಟನ್ ಡಿ.ರೊಜಾರಿಯೊ, ‘ಶ್ರಮಿಕ್ ರೈಲು’ ಸೇವೆ ಸ್ಥಗಿತಗೊಳಿಸಿರುವ ಅಂಶವನ್ನು ನ್ಯಾಯಪೀಠದ ಗಮನಕ್ಕೆ ತಂದರು.
ಇದಕ್ಕೆ ನ್ಯಾಯಪೀಠ, ‘ಕಾರ್ಮಿಕರು ಸಂಕಷ್ಟ ಸ್ಥಿತಿ ಎದುರಿಸುತ್ತಿದ್ದಾರೆ. ಹೀಗಾಗಿ, ಶ್ರಮಿಕ್ ರೈಲು ಸೇವೆ ನಿಲ್ಲಿಸುವ ನಿಲುವು ಮರುಪರಿಶೀಲನೆ ಮಾಡಬೇಕು’ ಎಂದು ಸೂಚಿಸಿತು.