ಬೆಂಗಳೂರು: ಬಾಗಲಗುಂಟೆ ಠಾಣೆ ವ್ಯಾಪ್ತಿಯ ಮನೆಯೊಂದರಲ್ಲಿ 2019ರಲ್ಲಿ ನಡೆದಿದ್ದ ಕಳ್ಳತನ ಸಂಬಂಧ ಆರೋಪಿ ಅನಿಲ್ ದೇವ್ (32) ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ.
‘ಜಾಲಹಳ್ಳಿಯ ಅನಿಲ್ದೇವ್ ಬಂಧನದಿಂದ 8 ಕಳ್ಳತನ ಪ್ರಕರಣಗಳು ಪತ್ತೆಯಾಗಿವೆ. ಆತನಿಂದ ₹19 ಲಕ್ಷ ಮೌಲ್ಯದ ಚಿನ್ನಾಭರಣ ಜಪ್ತಿ ಮಾಡಲಾಗಿದೆ’ ಎಂದು ಪೊಲೀಸರು ಹೇಳಿದರು.
‘ಟಿ.ದಾಸರಹಳ್ಳಿ ಕಲ್ಯಾಣನಗರದ ನಿವಾಸಿ ಪ್ರಭಾಕರನ್ ಕುಟುಂಬ ಸಮೇತ ತಮಿಳುನಾಡಿಗೆ ಹೋಗಿದ್ದರು. ಮನೆಯಲ್ಲಿ ಯಾರೂ ಇಲ್ಲದ್ದನ್ನು ತಿಳಿದುಕೊಂಡ ಆರೋಪಿ, ಬೀಗ ಮುರಿದು ಕಳ್ಳತನ ಎಸಗಿ ಪರಾರಿಯಾಗಿದ್ದ’ ಎಂದರು.
‘ಬಾಗಲಗುಂಟೆ, ಸೋಲದೇವನಹಳ್ಳಿ, ಪೀಣ್ಯ ಠಾಣೆ ವ್ಯಾಪ್ತಿಯಲ್ಲೂ ಆರೋಪಿ ಕೃತ್ಯ ಎಸಗಿದ್ದು ವಿಚಾರಣೆಯಿಂದ ಗೊತ್ತಾಗಿದೆ’ ಎಂದೂ ಪೊಲೀಸರು ಹೇಳಿದರು.