ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೊರಮಾವು ವಾರ್ಡ್‌ನಲ್ಲಿ ಬೀದಿನಾಯಿ ಹಾವಳಿ

ಪ್ರಾಣಿ ಪ್ರಿಯರು ಹಾಗೂ ಸ್ಥಳೀಯರಿಂದ ದೂರು– ಪ್ರತಿದೂರು
Last Updated 5 ಜುಲೈ 2019, 20:01 IST
ಅಕ್ಷರ ಗಾತ್ರ

ಬೆಂಗಳೂರು:ಹೊರಮಾವು ವಾರ್ಡ್‌ನದೊಡ್ಡಯ್ಯ ಬಡಾವಣೆ ಹಾಗೂ ಸುತ್ತಮುತ್ತ ಪ್ರದೇಶಗಳಲ್ಲಿ ಬೀದಿನಾಯಿಗಳ ಹಾವಳಿ ಹೆಚ್ಚಾಗಿದ್ದು, ಸ್ಥಳೀಯ ನಿವಾಸಿಗಳು ಮಕ್ಕಳನ್ನು ಮನೆಯಿಂದ ಹೊರಗೆ ಕಳುಹಿಸಲು ಭಯಪಡುತ್ತಿದ್ದಾರೆ.

ಮಹಿಳೆಯರು ಹಾಗೂ ವೃದ್ಧರು ರಸ್ತೆಯಲ್ಲಿ ಒಬ್ಬಂಟಿಯಾಗಿ ಓಡಾಡಲೂ ಹಿಂದೇಟು ಹಾಕುತ್ತಿದ್ದಾರೆ. ಗುಂಪು ಕಟ್ಟಿಕೊಂಡು ಓಡಾಡುತ್ತಿರುವ ಬೀದಿನಾಯಿಗಳು ಗುರಾಯಿಸಿ ದಾಳಿ ಮುನ್ಸೂಚನೆ ನೀಡುತ್ತಿರುವುದು ಸ್ಥಳೀಯರ ಆತಂಕಕ್ಕೆ ಕಾರಣವಾಗಿದೆ.

‘ಕಳೆದ ವರ್ಷ ಜೂನ್ 27ರಂದು ದೊಡ್ಡಯ್ಯ ಬಡಾವಣೆಯಲ್ಲೇ ಮಗುವೊಂದನ್ನು ನಾಯಿ ಎಳೆದೊಯ್ದಿತ್ತು. ಆ ಭಯಾನಕ ದೃಶ್ಯ ಸಿ.ಸಿ.ಟಿ.ವಿ ಕ್ಯಾಮರಾದಲ್ಲಿ ಸೆರೆಯಾಗಿತ್ತು. ಅದನ್ನು ನೋಡಿದಾಗಿನಿಂದ ಈ ಪ್ರದೇಶದಲ್ಲಿ ಓಡಾಡಲು ಭಯವಾಗುತ್ತಿದೆ’ ಎಂದು ಸ್ಥಳೀಯ ನಿವಾಸಿಗಳು ಹೇಳಿದರು.

‘ಪದೇ ಪದೇ ಜನರನ್ನು ಬೆನ್ನಟ್ಟಿರುವ ಹತ್ತಕ್ಕೂ ಹೆಚ್ಚು ಬೀದಿನಾಯಿಗಳ ವಿರುದ್ಧ ಪೊಲೀಸ್ ಠಾಣೆಗೆದೂರು ನೀಡಲಾಗಿದೆ. ಆದರೆ, ಪೊಲೀಸರು ಯಾವುದೇ ಕ್ರಮ ಕೈಗೊಂಡಿಲ್ಲ. ನಾಯಿಗಳಿಂದ ಏನಾದರೂ ಅನಾಹುತಗಳು ಸಂಭವಿಸಿದರೆ ಯಾರು ಹೊಣೆ’ ಎಂದು ಅವರು ಪ್ರಶ್ನಿಸಿದರು.

ದೂರು –ಪ್ರತಿದೂರು: ನಾಯಿಗಳ ವಿರುದ್ಧ ಸ್ಥಳೀಯರು ದೂರು ನೀಡಿದರೆ, ಕೆಲ ಪ್ರಾಣಿ ಪ್ರಿಯರು ಸಹ ಪ್ರತಿ ದೂರು ನೀಡಿದ್ದಾರೆ.

‘ನಾಯಿಗಳನ್ನು ಸ್ಥಳೀಯರು ಹಿಂಸಿಸುತ್ತಿರುವುದಾಗಿ ಪ್ರಾಣಿಪ್ರಿಯರು ಆರೋಪಿಸುತ್ತಿದ್ದಾರೆ. ಬಿಬಿಎಂಪಿ ಹಾಗೂ ಸ್ಥಳೀಯರ ವಿರುದ್ಧ ಕ್ರಮ ಕೈಗೊಳ್ಳುವಂತೆ ಒತ್ತಾಯಿಸುತ್ತಿದ್ದಾರೆ. ಈ ಪ್ರಕರಣದ ಬಗ್ಗೆ ಕಾನೂನು ತಜ್ಞರ ಅಭಿಪ್ರಾಯ ಪಡೆದು ಮುಂದುವರಿಯಲಾಗುವುದು’ ಎಂದು ಪೊಲೀಸ್ ಅಧಿಕಾರಿಯೊಬ್ಬರು ಹೇಳಿದರು.

ಸಭೆಯಲ್ಲಿ ಪ್ರಸ್ತಾ‍ಪ: ‘ಬೀದಿನಾಯಿಗಳ ಬಗ್ಗೆ ಸ್ಥಳೀಯರು ಸಾಕಷ್ಟು ಬಾರಿ ದೂರು ನೀಡಿದ್ದಾರೆ. ಮನುಷ್ಯರ ಜೀವಕ್ಕೆ ಅಪಾಯವನ್ನುಂಟು ಮಾಡುವ ಬೀದಿನಾಯಿಗಳ ಸ್ಥಳಾಂತರ ಸಂಬಂಧ ನಿರ್ಣಯ ಅಂಗೀಕರಿಸುವಂತೆ ಬಿಬಿಎಂಪಿ ಸಭೆಯಲ್ಲಿ ವಿಷಯ ಪ್ರಸ್ತಾಪಿಸಲಿದ್ದೇನೆ’ ಎಂದು ಹೊರಮಾವು ವಾರ್ಡ್‌ನ ಸದಸ್ಯೆ ರಾಧಮ್ಮ ವೆಂಕಟೇಶ್ ‘ಪ್ರಜಾವಾಣಿ’ಗೆ ತಿಳಿಸಿದರು.

‘ಕೆಲವರು ಬೀದಿನಾಯಿಗಳನ್ನು ಗುಂಪಾಗಿ ಸೇರಿಸಿ ಮಾಂಸವನ್ನು ಹಾಕುತ್ತಿದ್ದಾರೆ. ಬೇರೆ ಪ್ರದೇಶದ ನಾಯಿಗಳು ಸಹ ದೊಡ್ಡಯ್ಯ ಬಡಾವಣೆಗೆ ಬರುತ್ತಿವೆ. ದಿನದಿಂದ ದಿನಕ್ಕೆ ಅವುಗಳ ಸಂಖ್ಯೆ ಹೆಚ್ಚಾಗುತ್ತಿದ್ದು, ಮನುಷ್ಯರು ರಸ್ತೆಯಲ್ಲಿ ಓಡಾಡದಂಥ ಸ್ಥಿತಿಯೂ ನಿರ್ಮಾಣವಾಗುತ್ತಿದೆ’ ಎಂದರು.

‘ಬೀದಿನಾಯಿಗಳ ದಾಳಿಯಿಂದ ಇದುವರೆಗೆ 10ಕ್ಕೂ ಹೆಚ್ಚು ಜನರಿಗೆ ಗಾಯವಾಗಿದೆ. ಅವರೆಲ್ಲ ಬಿಬಿಎಂಪಿ, ಪೊಲೀಸರಿಗೆ ದೂರು ನೀಡಿದ್ದಾರೆ. ಪ್ರಾಣಿ ಪ್ರಿಯರ ವಿರೋಧವಿರುವುದರಿಂದ ನಾಯಿಗಳನ್ನು ಸ್ಥಳಾಂತರಿಸಲು ಸಾಧ್ಯವಾಗುತ್ತಿಲ್ಲ. ಈ ಸಮಸ್ಯೆ ಬಗೆಹರಿಸಲು ಸ್ಥಳೀಯರು, ಪ್ರಾಣಿ ಪ್ರಿಯರು, ಬಿಬಿಎಂಪಿ ಅಧಿಕಾರಿಗಳು ಹಾಗೂ ಪೊಲೀಸರ ಸಭೆಯನ್ನು ನಿರಂತರವಾಗಿ ನಡೆಸಲಾಗುತ್ತಿದೆ. ಶನಿವಾರವೂ ಸಭೆ ಹಮ್ಮಿಕೊಳ್ಳಲಾಗಿದೆ’ ಎಂದು ರಾಧಮ್ಮ ಮಾಹಿತಿ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT