ಕೆಂಗೇರಿ: ‘ವಸತಿ ಯೋಜನೆಯಡಿ ಯಶವಂತಪುರ ಕ್ಷೇತ್ರದ 9 ಸಾವಿರ ಕುಟುಂಬಗಳಿಗೆ ವಸತಿ ಸೌಲಭ್ಯ ಕಲ್ಪಿಸಲಾಗುವುದು’ ಎಂದು ಸಹಕಾರ ಸಚಿವ ಎಸ್.ಟಿ.ಸೋಮಶೇಖರ್ ಹೇಳಿದರು.
ಕುಂಬಳಗೋಡು ಗ್ರಾಮಪಂಚಾಯಿತಿ ಕಚೇರಿಯಲ್ಲಿ ನಡೆದ ಅಧಿಕಾರ ಸ್ವೀಕಾರ ಕಾರ್ಯಕ್ರಮದಲ್ಲಿ ನೂತನ ಅಧ್ಯಕ್ಷೆ ಆಶಾ ಹಾಗೂ ಉಪಾಧ್ಯಕ್ಷರಾದ ಎನ್.ನರಸಿಂಹಮೂರ್ತಿ ಅವರನ್ನು ಅಭಿನಂದಿಸಿ ಮಾತನಾಡಿದರು.
‘ವಸತಿ ಯೋಜನೆಯಡಿ ಯಶವಂತಪುರ ಕ್ಷೇತ್ರದಲ್ಲಿ ಬಹುಮಹಡಿ ಕಟ್ಟಡ ನಿರ್ಮಾಣ ಮಾಡಲಾಗುತ್ತಿದೆ. 18,000ಕ್ಕೂ ಹೆಚ್ಚು ಮನೆಗಳು ನಿರ್ಮಾಣ ಹಂತದಲ್ಲಿದೆ’ ಎಂದರು.
‘ಸುಮಾರು ₹48 ಕೋಟಿ ವೆಚ್ಚದಲ್ಲಿ ಚಿಕ್ಕನಹಳ್ಳಿ, ರಾಮೋಹಳ್ಳಿ, ಹಾಗೂ ಕುಂಬಳಗೂಡು ಗ್ರಾಮ ಪಂಚಾಯಿತಿ ವ್ಯಾಪ್ತಿಯ 32 ಗ್ರಾಮಗಳಿಗೆ ಮಂಚನಬೆಲೆ ಜಲಾಶಯದಿಂದ ನೀರು ಹರಿಸುವ ಯೋಜನೆ ಜಾರಿಯಲ್ಲಿದೆ. ಶೀಘ್ರದಲ್ಲೇ ಈ ಎಲ್ಲಾ ಗ್ರಾಮಗಳಿಗೂ ನೀರು ಸರಬರಾಜಾಗಲಿದೆ ಎಂದರು.
ನಿಕಟಪೂರ್ವ ಅಧ್ಯಕ್ಷ ಚಿಕ್ಕರಾಜು, ಉಪಾಧ್ಯಕ್ಷೆ ಯಶೋಧಮ್ಮ, ಬಿಜೆಪಿ ಗ್ರಾಮಾಂತರ ಮಂಡಲ್ ಅಧ್ಯಕ್ಷ ರಂಗರಾಜು, ನಿಶಾಂತ್ ಸೋಮಶೇಖರ್, ತಾಲೂಕು ಪಂಚಾಯಿತಿ ಸದಸ್ಯ ಕೃಷ್ಣಪ್ಪ, ಅನಿಲ್ ಚಳಗೇರಿ, ಪಿಡಿಒ ಬಸವರಾಜ್, ಕುಂಬಳಗೂಡು ಗ್ರಾಮ ಪಂಚಾಯಿತಿ ನೂತನ ಸದಸ್ಯರು ಮತ್ತು ಸಿಬ್ಬಂದಿ ಉಪಸ್ಥಿತರಿದ್ದರು.