ಬೆಂಗಳೂರು: ಹೆಚ್ಚಿನ ವರದಕ್ಷಿಣೆ ತರಲಿಲ್ಲವೆಂಬ ಕಾರಣಕ್ಕೆ ಪತ್ನಿಯನ್ನು ಚಾಕುವಿನಿಂದ ಇರಿದು ಕೊಂದಿದ್ದ ಪತಿ ಪರಶುರಾಮ ದೇಸಾಯಿ ಎಂಬಾತನಿಗೆ ಜೀವಾವಧಿ ಶಿಕ್ಷೆ ವಿಧಿಸಿ ನಗರದ 72ನೇ ಸಿಸಿಎಚ್ ನ್ಯಾಯಾಲಯ ಆದೇಶ ಹೊರಡಿಸಿದೆ.
‘ಯಾದಗಿರಿ ಜಿಲ್ಲೆಯ ಪರಶುರಾಮ ಹಾಗೂ ಯಲ್ಲಮ್ಮ ಕೆಲಸಕ್ಕಾಗಿ ಬೆಂಗಳೂರಿಗೆ ಬಂದಿದ್ದರು. ಪೀಣ್ಯ ಠಾಣೆ ವ್ಯಾಪ್ತಿಯ ನೆಲಗೆದರನಹಳ್ಳಿಯಲ್ಲಿ ದಂಪತಿ ವಾಸವಿದ್ದರು. ಮದುವೆ ವೇಳೆ ವರದಕ್ಷಿಣೆ ಪಡೆದಿದ್ದ ಪರಶುರಾಮ, ಪುನಃ ₹ 3 ಲಕ್ಷ ನಗದು ಹಾಗೂ ಬೈಕ್ ವರದಕ್ಷಿಣೆ ತರುವಂತೆ ಪತ್ನಿಯನ್ನು ಪೀಡಿಸಲಾರಂಭಿಸಿದ್ದ’ ಎಂದು ಪೊಲೀಸ್ ಮೂಲಗಳು ಹೇಳಿವೆ.
‘ವರದಕ್ಷಿಣೆ ತರಲು ಪತ್ನಿ ಯಲ್ಲಮ್ಮ ನಿರಾಕರಿಸಿದ್ದರು. ಇದರಿಂದ ಸಿಟ್ಟಾಗಿದ್ದ ಪರಶುರಾಮ, ಚಾಕುವಿನಿಂದ ಇರಿದು ಕೊಂದಿದ್ದ. ಪ್ರಕರಣ ಸಂಬಂಧ ಪೊಲೀಸರು, ಪರಶುರಾಮ ನನ್ನು ಬಂಧಿಸಿ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಿದ್ದರು’ ಎಂದು ಮೂಲಗಳು ತಿಳಿಸಿವೆ.