ಬೆಂಗಳೂರು: ‘ಸಂಸದ ಪ್ರಜ್ವಲ್ ರೇವಣ್ಣಗೆ ಸಂಬಂಧಿಸಿದ ಪೆನ್ ಡ್ರೈವ್ ಪ್ರಕರಣದಲ್ಲಿ ಯಾರದ್ದಾದರೂ ಕೈವಾಡ ಕುರಿತಂತೆ ಎಚ್.ಡಿ.ಕುಮಾರಸ್ವಾಮಿ ಅವರ ಬಳಿ ಸಾಕ್ಷ್ಯವಿದ್ದರೆ ಮುಖ್ಯಮಂತ್ರಿಯವರಿಗೆ ನೀಡಲಿ’ ಎಂದು ಸಚಿವ ಸತೀಶ ಜಾರಕಿಹೊಳಿ ಹೇಳಿದರು.
‘ನನ್ನ ಬಳಿಯೂ ಪೆನ್ಡ್ರೈವ್ ಸಾಕ್ಷ್ಯವಿದೆ, ತನಿಖೆ ಮಾಡಿಸುತ್ತಾರಾ’ ಎಂಬ ಕುಮಾರಸ್ವಾಮಿ ಹೇಳಿಕೆ ಕುರಿತು ಪ್ರತಿಕ್ರಿಯಿಸಿದ ಅವರು, ‘ದಾಖಲೆ ನೀಡದೆ, ಮಾತನಾಡುವುದು ಕೆರೆಯಲ್ಲಿ ಮುಳುಗಿಸಿ ಏನೋ ವ್ಯವಹಾರ ಮಾಡಿದರು ಎನ್ನುವ ಗಾದೆ ಮಾತಿನಂತಾಗುತ್ತದೆ’ ಎಂದರು.
ಪೆನ್ ಡ್ರೈವ್ ಪ್ರಕರಣದ ಕುರಿತು ನಿತ್ಯವೂ ಮಾತನಾಡಲು ಆಗುವುದಿಲ್ಲ. ಸಂತ್ರಸ್ತ ಮಹಿಳೆಯರು ನೀಡಿದ ದೂರುಗಳನ್ನು ಆಧರಿಸಿ ವಿಶೇಷ ತನಿಖಾ ತಂಡ (ಎಸ್ಐಟಿ) ತನಿಖೆ ನಡೆಸುತ್ತಿದೆ. ಎಲ್ಲ ಪ್ರಕರಣಗಳನ್ನೂ ಸಿಬಿಐ ತನಿಖೆಗೆ ಒಪ್ಪಿಸಬೇಕು ಎಂಬುದು ಸರಿಯಲ್ಲ ಎಂದರು.
‘ಚುನಾವಣೆಯಲ್ಲಿ ಪೆನ್ ಡ್ರೈವ್ ಪ್ರಕರಣದಿಂದ ನಾವು ಲಾಭ ನಿರೀಕ್ಷಿಸಿಲ್ಲ. ನಮ್ಮ ಸರ್ಕಾರದ ಗ್ಯಾರಂಟಿ ಯೋಜನೆಗಳ ಆಧಾರದಲ್ಲಿ ಮತ ಕೇಳಿದ್ದೇವೆ. ಗ್ಯಾರಂಟಿ ಯೋಜನೆಗಳಿಂದ ನಮ್ಮ ಪಕ್ಷಕ್ಕೆ ಅನುಕೂಲ ಆಗುತ್ತದೆ ಎನ್ನುವ ನಿರೀಕ್ಷೆ ಇದೆ’ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
‘ಚುನಾವಣೆಯಲ್ಲಿ ಅನುಕೂಲ ಆಗಲಿ ಎಂದು ಉಪ ಮುಖ್ಯಮಂತ್ರಿ ಹುದ್ದೆಗಳ ಕುರಿತು ಪ್ರಸ್ತಾಪಿಸಲಾಗಿತ್ತು. ಈಗ ಚುನಾವಣೆ ಮುಗಿದಿದೆ. ಉಪ ಮುಖ್ಯಮಂತ್ರಿ ಹುದ್ದೆಯ ಕೂಗು ಕೂಡ ಇಲ್ಲ’ ಎಂದು ಜಾರಕಿಹೊಳಿ ಹೇಳಿದರು.