ಬೆಂಗಳೂರು: ರಾಜಕಾಲುವೆಗಳ ದುರಸ್ತಿಗಾಗಿ 2019ರ ಏಪ್ರಿಲ್ನಿಂದ 2021ರ ಮಾರ್ಚ್ವರೆಗಿನ ಅವಧಿಯಲ್ಲಿ ವೆಚ್ಚ ಮಾಡಿರುವ ಒಟ್ಟು ₹490 ಕೋಟಿ ಮೊತ್ತದ ಕುರಿತು ಲೆಕ್ಕಪರಿಶೋಧಕರು ಗಂಭೀರ ಆಕ್ಷೇಪಗಳನ್ನು ವ್ಯಕ್ತಪಡಿಸಿದ್ದಾರೆ.
ಕರ್ನಾಟಕ ರಾಜ್ಯ ಲೆಕ್ಕಪರಿಶೋಧನೆ ಮತ್ತು ಲೆಕ್ಕಪತ್ರ ಇಲಾಖೆಯು ಪ್ರತಿ ವರ್ಷ ಬಿಬಿಎಂಪಿಯ ವಿವಿಧ ವಿಭಾಗಗಳ ಆಡಿಟ್ ಕೈಗೊಳ್ಳುತ್ತದೆ
ಹಲವು ಕಾಮಗಾರಿಗಳನ್ನು ಕೈಗೊಂಡಿರುವ ಬಗ್ಗೆ ಸಾಕ್ಷ್ಯಾಧಾರಗಳನ್ನು ಒದಗಿಸಿಲ್ಲ ಮತ್ತು ಡಬಲ್ ಬಿಲ್ಲಿಂಗ್ಗೆ ಅವಕಾಶ ಕಲ್ಪಿಸಿರುವ ಕುರಿತ ಲೋಪಗಳನ್ನು ವರದಿಯಲ್ಲಿ ಉಲ್ಲೇಖಿಸಲಾಗಿದೆ.
ಆರ್ಟಿಐ ಅಡಿಯಲ್ಲಿ ಪಡೆದಿರುವ ಮಾಹಿತಿಯಲ್ಲಿ ಈ ವಿಷಯಗಳು ಗೊತ್ತಾಗಿವೆ.
ಈ ಅವಧಿಯಲ್ಲಿ ಕೈಗೊಂಡಿರುವ 91 ಕಾಮಗಾರಿಗಳಲ್ಲಿ ವ್ಯತ್ಯಾಸಗಳನ್ನು ಲೆಕ್ಕಪರಿಶೋಧಕರು ಪತ್ತೆ ಮಾಡಿದ್ದು, ₹287 ಕೋಟಿ ಮೊತ್ತ ವೆಚ್ಚ ಕುರಿತು ಕುರಿತು ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಹೆಚ್ಚುವರಿ ಪಾವತಿಸಿರುವ ₹14.19 ಕೋಟಿ ವಸೂಲಿ ಮಾಡುವಂತೆ ಬಿಬಿಎಂಪಿಗೆ ಸೂಚಿಸಲಾಗಿದೆ.
2018–19ರ ಅವಧಿಯ ಲೆಕ್ಕಪರಿಶೋಧನಾ ವರದಿಯಲ್ಲೂ ₹202 ಕೋಟಿ ಮೊತ್ತದ 41 ಕಾಮಗಾರಿಗಳಲ್ಲಿನ ವ್ಯತ್ಯಾಸಗಳನ್ನು ಪತ್ತೆ ಮಾಡಲಾಗಿತ್ತು. ಹೀಗಾಗಿ, ₹6.65 ಕೋಟಿ ವಸೂಲಿ ಮಾಡಲು ಸೂಚಿಸಲಾಗಿತ್ತು.
ಬೊಮ್ಮನಹಳ್ಳಿ, ಕೆ.ಆರ್.ಪುರ, ಮಹದೇವಪುರ, ಆರ್.ಆರ್. ನಗರ, ಯಶವಂತಪು, ಸರ್ವಜ್ಞನಗರ, ಯಲಹಂಕ, ಜಯನಗರ ಮತ್ತು ಚಾಮರಾಜಪೇಟೆ ಕ್ಷೇತ್ರಗಳಲ್ಲೇ ಅತಿ ಹೆಚ್ಚು ಲೋಪಗಳು ಪತ್ತೆಯಾಗಿವೆ.
‘ಲೆಕ್ಕಪರಿಶೋಧನೆಯಲ್ಲಿನ ಪ್ರಸ್ತಾಪಿಸಿದ ಎಲ್ಲವೂ ಗಂಭೀರವಾದ ವ್ಯತ್ಯಾಸಗಳಿಂದ ಕೂಡಿಲ್ಲ. ಈ ಬಗ್ಗೆ ಸಾರ್ವಜನಿಕ ಲೆಕ್ಕಸಮಿತಿ ಪರಿಶೀಲನೆ ನಡೆಸಲಿದೆ’ ಎಂದು ಬಿಬಿಎಂಪಿ ಆಯುಕ್ತ ತುಷಾರ್ ಗಿರಿನಾಥ್ ತಿಳಿಸಿದ್ದಾರೆ.