ಬೆಂಗಳೂರು:‘ಐಎಂಎ ಸಮೂಹ’ ಕಂಪನಿ ಮಾಲೀಕ ಮನ್ಸೂರ್ ಖಾನ್,‘ಎದೆ ನೋಯುತ್ತಿದೆ’ ಎಂದು ನರಳಾಡಿದ್ದರಿಂದಾಗಿ ಭಾನುವಾರ ಜಯದೇವ ಆಸ್ಪತ್ರೆಗೆ ಕರೆತಂದು ತಪಾಸಣೆಗೆ ಒಳಪಡಿಸಲಾಯಿತು.
ಮನ್ಸೂರ್ ಖಾನ್ ಅವರನ್ನು ಕಸ್ಟಡಿಗೆ ಪಡೆದಿರುವ ಇ.ಡಿ ಅಧಿಕಾರಿಗಳು, ಅಜ್ಞಾತ ಸ್ಥಳದಲ್ಲಿಟ್ಟು ವಿಚಾರಣೆ ನಡೆಸುತ್ತಿದ್ದಾರೆ. ‘ಎದೆ ನೋವು ಕಾಣಿಸಿಕೊಂಡಿದೆ’ ಎಂದು ನರಳಲು ಆರಂಭಿಸಿದ್ದ ಆರೋಪಿ, ‘ಆಸ್ಪತ್ರೆಗೆ ಕರೆದೊಯ್ಯಿರಿ’ ಎಂದು ಪಟ್ಟು ಹಿಡಿದಿದ್ದರು.
ಕೂಡಲೇ ಇ.ಡಿ ಅಧಿಕಾರಿಗಳು, ಮನ್ಸೂರ್ ಖಾನ್ ಅವರನ್ನು ವಿಕ್ಟೋರಿಯಾ ಆಸ್ಪತ್ರೆಗೆ ಕರೆತಂದು ವೈದ್ಯಕೀಯ ತಪಾಸಣೆಗೆ ಒಳಪಡಿಸಿದರು. ತಪಾಸಣೆ ನಡೆಸಿದ ವೈದ್ಯರು, ‘ಯಾವುದೇ ತೊಂದರೆ ಕಾಣಿಸುತ್ತಿಲ್ಲ’ ಎಂದು ಹೇಳಿರುವುದಾಗಿ ಮೂಲಗಳು ತಿಳಿಸಿವೆ.
ಇ.ಡಿ ಅಧಿಕಾರಿಗಳು, ಅವರನ್ನು ಜಯದೇವ ಆಸ್ಪತ್ರೆಗೆ ಕರೆದೊಯ್ದು ತಪಾಸಣೆಗೆ ಒಳಪಡಿಸಿದರು. ತಡರಾತ್ರಿವರೆಗೂ ಖಾನ್ ಅವರ ಆರೋಗ್ಯ ತಪಾಸಣೆ ಪ್ರಕ್ರಿಯೆ ನಡೆಯಿತು.
‘ವಿಚಾರಣೆಯಿಂದ ತಪ್ಪಿಸಿಕೊಳ್ಳುವುದಕ್ಕಾಗಿ ಆರೋಪಿ, ಎದೆನೋವು ಎಂದು ನಾಟಕವಾಡುತ್ತಿದ್ದಾರೆ. ವಿಕ್ಟೋರಿಯಾ ಆಸ್ಪತ್ರೆಯಿಂದ ಜಯದೇವ ಆಸ್ಪತ್ರೆಗೆ ಕರೆತರಲಾಗಿದೆ. ವೈದ್ಯರ ವರದಿಯ ಬಳಿಕ ನಿಜಾಂಶ ತಿಳಿಯಲಿದೆ’ ಎಂದು ಮೂಲಗಳು ಹೇಳಿವೆ.